ಪುತ್ತೂರು : ಅಗ್ನಿಪಥ್ ಸಹಿತ ವಿವಿಧ ಸೇನಾ ನೇಮಕಾತಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಪುತ್ತೂರಿನ ವಿದ್ಯಾಮಾತಾ
ಅಕಾಡೆಯಿಂದ ನಿವೃತ್ತ ಸೈನಿಕರ ಸಂಘ ದ.ಕ.ಜಿಲ್ಲೆ ಮತ್ತು ಪುತ್ತೂರು ಘಟಕಗಳ ಸಹಯೋಗದೊಂದಿಗೆ ಭಾರತೀಯ ಸೇನಾ ನೇಮಕಾತಿಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಉಚಿತ ದೈಹಿಕ ಸದೃಢತೆಯ ಮೈದಾನ ತರಬೇತಿ ಕಾರ್ಯಾಗಾರವು ಜು.2 ರಂದು ಪುತ್ತೂರು ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಜರುಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಅವರು ಮಾತನಾಡಿ, ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿಪಥದ ಅಡಿಯಲ್ಲಿ ಅಂತಿಮ ಹಂತದ ದೈಹಿಕ ಕ್ಷಮತೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಈಗಾಗಲೇ ನಮ್ಮ 7 ಜನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಜೊತೆಗೆ ಭಾರತೀಯ ಭೂಸೇನೆಯ ನರ್ಸಿಂಗ್ ಅಸಿಸ್ಟೆಂಟ್ ಹುದ್ದೆಗೆ ಗಗನ್ ದೀಪಕ್ ಅವರು ಆಯ್ಕೆಯಾಗಿದ್ದಾರೆ. ಇವೆಲ್ಲ ವಿದ್ಯಾಮಾತಾ ಅಕಾಡೆಮಿಯ ಮಹತ್ವದ ಕಾರ್ಯವಾಗಿದ್ದು, ಇದೀಗ ಮತ್ತೊಮ್ಮೆ ಭಾರತೀಯ ಸೇನಾ ನೇಮಕಾತಿಗಳ ಆಯ್ಕೆ ಕುರಿತು
ಅವರಿಗೆ ವಿಶೇಷ ದೈಹಿಕ ಸದೃಢತೆಯ ಮೈದಾನ ತರಬೇತಿ ಕಾರ್ಯಗಾರ ನಡೆಸಲಿದ್ದೇವೆ. ಈ ಬಾರಿ ಆರಂಭದಲ್ಲಿ ರೈಟಿಂಗ್ ಪರೀಕ್ಷೆ ನಡೆಯಲಿದ್ದು, ಬಳಿಕ ದೈಹಿಕ ಪರೀಕ್ಷೆ ನಡೆಯಲಿದೆ.
ಈ ನಿಟ್ಟಿನಲ್ಲಿ ಜು.2 ರಂದು ನಡೆಯಲಿರುವ ಕಾರ್ಯಾಗಾರದಲ್ಲಿ ನಿವೃತ್ತ ಏರ್ವೈಸ್ ಮಾರ್ಷಲ್ ಕೆ.ರಮೇಶ್ ಕಾರ್ಣಿಕ್, ದ.ಕ.ಜಿಲ್ಲಾ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ ಮತ್ತು ಪುತ್ತೂರು ತಾಲೂಕು ಘಟಕದ ನಿವೃತ್ತ ಸೈನಿಕರು ತರಬೇತಿ ಕಾರ್ಯದಲ್ಲಿ ಅವರ ಅನುಭವ ಹಂಚಿಕೊಳ್ಳಲಿದ್ದಾರೆ. ಕಳೆದ ಬಾರಿ ಅಗ್ನಿಪಥ್ಗೆ ಹೋದವರನ್ನು ಕರೆಸಿ ಅವರ ಅನುಭವದಿಂದ ಅಭ್ಯರ್ಥಿಗಳನ್ನು ಹುರಿದುಂಬಿಸಲಾಗುವುದು. ಶಾಸಕ ಅಶೋಕ್ ಕುಮಾರ್ ರೈ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ‘ಜೈ ಜವಾನ್, ಜೈಕಿಸಾನ್’ ಪ್ರಶಸ್ತಿ ಪುರಸ್ಕೃತ ನಮ್ಮ ಸಂಸ್ಥೆಯ ಸಲಹೆಗಾರರಾಗಿರುವ ನಿವೃತ್ತ ಸೈನಿಕ
ಕಾಂಬೋಡ್ ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಅಗ್ನಿಪಥ್/ ವಿವಿಧ ಸೇನಾ ನೇಮಕಾತಿಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಉಚಿತ ನೋಂದಾವಣೆಗಾಗಿ ಮೊಬೈಲ್ ಸಂಖ್ಯೆ 9148935808 ಅನ್ನು ಸಂಪರ್ಕಿಸುವಂತೆ ಭಾಗ್ಯೇಶ್ ರೈ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸೈನಿಕರ ಸಂಘದ ಪುತ್ತೂರು
ಘಟಕದ ಅಧ್ಯಕ್ಷ ರಾಮಚಂದ್ರ ಪುಚ್ಚೇರಿ, ಕಾರ್ಯದರ್ಶಿ ನಾಗಪ್ಪ ಗೌಡ, ವಿದ್ಯಾಮಾತಾ ಅಕಾಡೆಮಿಯ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅಳಕೆಮಜಲು ಉಪಸ್ಥಿತರಿದ್ದರು.


























