ಬಂಟ್ವಾಳ : ವಸತಿ ಸಮುಚ್ಚಯವೊಂದರ ಮನೆಯೊಂದರಲ್ಲಿ ಡಿಶ್ ರಿಪೇರಿ ಮಾಡುತ್ತಿದ್ದ ವೇಳೆ ಯುವಕನೋರ್ವ ಮೂರನೇ ಮಹಡಿ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ.

ಕೈಕಂಬ ಎಂಬಲ್ಲಿ ಜೂನ್ 30 ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಮೃತರನ್ನು ಆಚಾರಿಪಲ್ಕೆ ನಿವಾಸಿ ಯತೀಶ್ (32) ಎಂದು ಗುರುತಿಸಲಾಗಿದೆ.
ಯತೀಶ್ ಮೂರನೇ ಮಹಡಿಯಿಂದ ಕೆಲ ಭಾಗದಲ್ಲಿರುವ ಬಾವಿಯ ಮೇಲಿನ ಕಬ್ಬಿಣದ ರಕ್ಷಣಾ ಬೇಲಿಯ ಮೇಲೆ ಬಿದ್ದು ತಲೆಗೆ ಗಾಯಗೊಂಡಿದ್ದು, ಸಮಾದ್ ಕೈಕಂಬ ಆಂಬ್ಯುಲೆನ್ಸ್ ಮೂಲಕ ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಿದರೂ ಯಾವುದೇ ಪ್ರಯೋಜನವಾಗಿಲ್ಲ. ತಲೆಗೆ ಗಂಭೀರವಾದ ಏಟು ಬಿದ್ದಿರುವುದರಿಂದ ಯತೀಶ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.


























