ಮೂಡಿಗೆರೆ : ಚಾರ್ಮಾಡಿ ಘಾಟಿಯಲ್ಲಿರುವ ಜಲಪಾತಗಳಲ್ಲಿ ಪ್ರವಾಸಿಗರು ಹುಚ್ಚಾಟ ನಡೆಸಿ ಸೆಲ್ಫಿ ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕೆಲ್ಲಾ ಕಡಿವಾಣ ಹಾಕಲು ಇದೀಗ ಜಲಪಾತದ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಇತ್ತೀಚಿಗೆ ಕುಂದಾಪುರದ ಅರಶಿನಗುಂಡಿ ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ಶರತ್ ಸಾವನ್ನಪ್ಪಿದ್ದ ಘಟನೆ ನಡೆದ ಬಳಿಕವೂ ಪ್ರವಾಸಿಗರು ಜಲಪಾತಗಳಲ್ಲಿ ಅಪಾಯಕಾರಿಯಾಗಿ ಸೆಲ್ಫಿ, ರೀಲ್ಸ್ ಮಾಡುವುದು ಕಂಡುಬಂದಿದೆ.
ಚಾರ್ಮಾಡಿ ಜಲಪಾತಗಳ ಬಳಿ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಕುಣಿಯುತ್ತಿದ್ದ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದರು. ಅಷ್ಟು ಮಾತ್ರವಲ್ಲದೆ ರಸ್ತೆ ಮಧ್ಯೆ ಕುಣಿಯೋ ಧಾವಂತದಲ್ಲಿ ವಾಹನಗಳಿಗೂ ಅಡ್ಡ ಹೋಗುತ್ತಿದ್ದರು ಇದರಿಂದ ಒಮ್ಮೆ ರೋಗಿ ಹೊತ್ತ ಆಂಬ್ಯುಲೆನ್ಸ್ ಕೂಡ ಪರದಾಟ ನಡೆಸಿತ್ತು. ಬಂಡೆ ಮೇಲಿಂದ ಬಿದ್ದು ಕೈ-ಕಾಲು ಮುರಿದುಕೊಂಡವರು ಇದ್ದಾರೆ, ಜಾರೋ ಬಂಡೆ ಕೆಲವರ ಜೀವಕ್ಕೂ ಸಂಚಾಕಾರ ತಂದಿದೆ. ಈ ಹಿನ್ನೆಲೆ ಮುನ್ನೆಚ್ಛರಿಕೆಯ ಕ್ರಮವಾಗಿ ಕೆಲ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

























