ಪುತ್ತೂರು : ಪೆರ್ಲಂಪಾಡಿಯಲ್ಲಿ ನಡೆದ ಚರಣ್ ರಾಜ್ ರೈ ಹತ್ಯೆ ಪ್ರಕರಣ ಆರೋಪಿಗಳಿಗೆ ಆಶ್ರಯ ನೀಡಿದ್ದಾರೆನ್ನಲಾದ ಆರೋಪಿ ಪ್ರಜ್ವಲ್ ರವರಿಗೆ ಉಚ್ಚ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
2022 ಜು.4 ರಂದು ಚರಣ್ ರಾಜ್ ರವರ ಮಾವ ಕಿಟ್ಟಣ್ಣ ರೈ ಎಂಬುವವರು ಪೆರ್ಲಂಪಾಡಿ ಎಂಬಲ್ಲಿ ಮೆಡಿಕಲ್ ಶಾಪ್ ಪ್ರಾರಂಭಿಸುವವರಿದ್ದು ಈ ಹಿನ್ನೆಲೆ ಪೂರ್ವ ತಯಾರಿ ಕೆಲಸಕ್ಕೆ ಸಹಾಯ ಮಾಡಲು ಚರಣ್ ರಾಜ್ ಮತ್ತು ತನ್ನ ಸ್ನೇಹಿತ ನವೀನ್ ಕುಮಾರ್ ಕಾರಿನಲ್ಲಿ ಪೆರ್ಲಂಪಾಡಿಗೆ ತೆರಳಿ ಮೆಡಿಕಲ್ ಶಾಪ್ ಬಳಿ ಕೆಲಸದಲ್ಲಿ ತೊಡಗಿದ್ದ ವೇಳೆ ಚರಣ್ ರಾಜ್ ರೈ ರವರು ಹೊರಗಡೆ ಬಂದು ಕಾರಿನ ಬಳಿ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದಾಗ ಯಾರೋ ಹಲ್ಲೆ ಮಾಡಿದ್ದು ಚರಣ್ ಬೊಬ್ಬೆ ಹೊಡೆಯುವುದು ಕೇಳಿ ನವೀನ್ ಕುಮಾರ್ ಹೊರಗೆ ಬಂದಾಗ ಚರಣ್ ರಾಜ್ ರೈ ರವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದು, ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ. ಸಂ. 49/22 ರಂತೆ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ಪ್ರಜ್ವಲ್ ರನ್ನು ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿಯಲ್ಲಿ 7ನೇ ಆರೋಪಿಯನ್ನಾಗಿ ಪ್ರಕರಣ ದಾಖಲಿಸಲಾಗಿತ್ತು.
ಸದರಿ 7ನೇ ಆರೋಪಿಯು ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ನ್ಯಾಯಾಲಯ ಪುತ್ತೂರು ಇಲ್ಲಿಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಸದ್ರಿ ಅರ್ಜಿಯನ್ನು ಐದನೇ ಹೆಚ್ಚುವರಿ ನ್ಯಾಯಾಧೀಶರ ನ್ಯಾಯಾಲಯ ಪುತ್ತೂರು ಇವರು ತಿರಸ್ಕರಿಸಿದ್ದು, ನಂತರ 7ನೇ ಆರೋಪಿಯಾದ ಪ್ರಜ್ವಲ್ ರವರು ಉಚ್ಚ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಸದ್ರಿ ಅರ್ಜಿಯನ್ನು ಕೈಗೆತ್ತಿಕೊಂಡು ನ್ಯಾಯಾಲಯವು 7ನೇ ಆರೋಪಿಯಾದ ಪ್ರಜ್ವಲ್ ರವರಿಗೆ ಹೈಕೋರ್ಟ್ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರು ಆ.3 ರಂದು ಷರತ್ತು ಬದ್ಧ ಜಾಮೀನು ಮಂಜೂರು ಗೊಳಿಸಿದ್ದಾರೆ.
ಆರೋಪಿ ಪರ ವಕೀಲರಾದ ರಾಜಶೇಖರ ಎಸ್ ಮತ್ತು ಮಹೇಶ್ ಕಜೆ ರವರು ವಾದಿಸಿರುತ್ತಾರೆ.


























