ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮಂಗಳೂರಿನ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ ಸೇರಿದಂತೆ ಸೋಮವಾರ ಎಲ್ಲಾ ನಾಗಾಲಯಗಳಲ್ಲಿ ಶ್ರದ್ಧಾ ಭಕ್ತಿಯ ನಾಗರಪಂಚಮಿಯನ್ನು ಆಚರಿಸಲಾಯಿತು.
ತುಳುನಾಡಿನಲ್ಲಿ ನಾಗರ ಪಂಚಮಿಯ ಸಡಗರ ಸಂಭ್ರಮ ಮನೆ ಮಾಡಿದೆ. ಪರಶುರಾಮನ ಸೃಷ್ಟಿಯಾದ ತುಳುನಾಡಿನಲ್ಲಿ ನಾಗಾರಾಧನೆಗೆ ವಿಶಿಷ್ಟ ಸ್ಥಾನಮಾನವಿದೆ. ಈ ಹಬ್ಬ ಪ್ರಕೃತಿ ಪೂಜೆಯ ಸಂಕೇತವಾಗಿದ್ದು, ಸಂತಾನ ಅಭಿವೃದ್ಧಿ, ಕೌಟುಂಬಿಕ ನೆಮ್ಮದಿಗಾಗಿ ಲಕ್ಷಾಂತರ ಭಕ್ತರು ಪೂಜೆ ಸಲ್ಲಿಸುತ್ತಾರೆ. ಬೃಹತ್ ಮರಗಳ ನಡುವೆ, ದಟ್ಟ ಕಾನನದಲ್ಲಿ ಬನಗಳಲ್ಲಿರುವ ನಾಗರ ಕಲ್ಲಿಗೆ ಪೂಜೆ ಮಾಡುವುದು ತುಳುನಾಡಿನ ಸಂಪ್ರದಾಯ.
ಹಾಲು ಮತ್ತು ಎಳನೀರಿನ ಅಭಿಷೇಕದ ಮೂಲಕ ತನು ಅರ್ಪಿಸುವುದರಿಂದ ನಾಗಬ್ರಹ್ಮ ತೃಪ್ತನಾಗುತ್ತಾನೆ ಎಂಬುದು ಧಾರ್ಮಿಕ ನಂಬಿಕೆ. ಮಕ್ಕಳಾಗದವರು ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ನಾಗ ಪೂಜೆಯಿಂದಾಗಿ ಕುಟುಂಬದ ನೆಮ್ಮದಿ ಮತ್ತು ಐಶ್ವರ್ಯ ವೃದ್ಧಿಯೂ ಆಗುತ್ತದೆ ಎನ್ನುವುದು ನಂಬಿಕೆ.


























