ವಿಟ್ಲ : ಕೇರಳ ಕರ್ನಾಟಕ ಗಡಿಭಾಗದಲ್ಲಿರುವ ಕಾಸರಗೋಡು ಜಿಲ್ಲೆ ಎಣ್ಮಕಜೆ ಗ್ರಾಮದ ಪುಟ್ಟ ಹಳ್ಳಿಯಾದ ಕೂಟೇಲಿನಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮೀ ಉತ್ಸವವು ಪ್ರತಿವರ್ಷದಂತೆ ಸಂಭ್ರಮದಿಂದ ನಡೆಯಿತು.

ಕೂಟೇಲು ಶ್ರೀಕೃಷ್ಣ ಯುವಕ ಸಂಘದ ನೇತೃತ್ವದಲ್ಲಿ ಊರ ಪರವೂರ ನೂರಾರು ಮಂದಿ ಒಟ್ಟು ಸೇರಿ ಕೂಟೇಲು ಅಂಗನವಾಡಿಯ ಪರಿಸರದಲ್ಲಿ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿದರು.
ಪ್ರಾತಃಕಾಲದಲ್ಲಿ ವೇ.ಮೂ. ಕೂಟೇಲು ತಿರುಮಲೇಶ್ವರ ಭಟ್ಟರು ಶ್ರೀಕೃಷ್ಣ ಪೂಜೆಯನ್ನು ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಡ್ಯನಡ್ಕ ಶ್ರೀ ದುರ್ಗಾಪರಮೇಶ್ವರೀ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಸೇವೆ ನೆರವೇರಿತು.


ಜಾರುವ ಅಡ್ಡಕಂಬದ ನಡಿಗೆಯ ಮೂಲಕ ಆಟೋಟ ಸ್ಪರ್ಧೆ ಪ್ರಾರಂಭಗೊಂಡಿತು. ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಮಧ್ಯಾಹ್ನ ಅನ್ನದಾನ ನಡೆಯಿತು. ಸಾಯಂಕಾಲ ಸ್ಪರ್ಧೆಗಳ ಮುಕ್ತಾಯದ ನಂತರ ಯುವಕ ಸಂಘದ ಸದಸ್ಯರು ಮಾನವಗೋಪುರ ನಿರ್ಮಿಸಿ ಮೊಸರು ಕುಡಿಕೆಯ ಸಂಭ್ರಮವನ್ನು ಆಚರಿಸಿದರು.
ದಿನೇಶ್ ಸಿ.ಎಚ್. ಕ್ರೀಡಾಕೂಟದ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಾಯಂಕಾಲ ಸಭಾಕಾರ್ಯಕ್ರಮದ ಪ್ರಾರಂಭದಲ್ಲಿ ಪುಟ್ಟ ಮಕ್ಕಳ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು.

ಅಡ್ಯನಡ್ಕ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಸಭಾಧ್ಯಕ್ಷತೆ ವಹಿಸಿದರು. ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘವ ಸಾರಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಪ್ರಧಾನ ಉಪನ್ಯಾಸ ನೀಡಿದ ಚೇವಾರು ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಪ್ರಸಾದ್ ಮುಗು ಅವರು ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಉದ್ಘಾಟಕರಾದ ವೇ.ಮೂ. ತಿರುಮಲೇಶ್ವರ ಭಟ್ ಕೂಟೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿವರ್ಷದಂತೆ ಈ ವರ್ಷವೂ ನಡೆದ ಪ್ರತಿಭಾ ಪುರಸ್ಕಾರದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳಾದ ಲತಾಶ್ರೀ ಮುಳಿಯಾಲ, ವಿಧಾತ್ರೀ ಕೂಟೇಲು, ಸುದೀಪ್ ಸಾಂತಪದವು ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಸಾಧನೆಗೈದ ವಿದ್ಯಾರ್ಥಿ ಚರಣ್ ಕೂಟೇಲು ಇವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಶ್ರೀಕೃಷ್ಣ ಯುವಕ ಸಂಘದ ರೋಹಿತ್ ಕುಮಾರ್ ಸ್ವಾಗತಿಸಿ, ಈಶ್ವರ ಕೂಟೇಲು ವಂದಿಸಿದರು. ಬಹುಮಾನ ವಿಜೇತರ ಹೆಸರುಗಳನ್ನು ಕಿರಣ ಯಾದವ್ ಕೂಟೇಲು ಓದಿದರು. ವೇ.ಮೂ. ಕೇಶವ ಪ್ರಸಾದ ಭಟ್ ಕೂಟೇಲು ಕಾರ್ಯಕ್ರಮ ನಿರೂಪಿಸಿದರು.

























