ಮಂಡ್ಯ : ಜೆಸಿಬಿ ಚಾಲಕನೊಬ್ಬ ಪಾನಮತ್ತನಾಗಿ ಸಂತೆ ನಡೆಯುತ್ತಿದ್ದ ಸ್ಥಳಕ್ಕೆ ಜೆಸಿಬಿ ನುಗ್ಗಿಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.
ರಸ್ತೆ ಬದಿ ಅಂಗಡಿಗಳು, ತರಕಾರಿ ಅಂಗಡಿಗಳ ಮೇಲೆ ಜೆಸಿಬಿ ಚಲಿಸಿದೆ. ಜೆಸಿಬಿ ಡಿಕ್ಕಿ ರಭಸಕ್ಕೆ ಟೀ ಹೋಟೆಲ್, ತಳ್ಳುವ ಗಾಡಿಗಳು ಛಿದ್ರ-ಛಿದ್ರವಾಗಿವೆ. ಅದೃಷ್ಟವಶಾತ್, ಜೆಸಿಬಿ ನುಗ್ಗಿ ಬರುವುದನ್ನು ಗಮನಿಸಿ ಓಡಿದ್ದರಿಂದ ಜನರು ಸುರಕ್ಷಿತರಾಗಿದ್ದಾರೆ.
ಚಾಲಕ ಕುಡಿದ ಅಮಲಿನಲ್ಲಿ ಮನಸೋಇಚ್ಛೆ ಜೆಸಿಬಿ ಚಲಾಯಿಸಿದ್ದಾನೆ. ವ್ಯಾಪಾರಿಗಳು, ಸಾರ್ವಜನಿಕರು ಜೆಸಿಬಿ ನಿಲ್ಲಿಸುವಂತೆ ಕಲ್ಲು ತೂರಿದರು. ಬಳಿಕ ಜೆಸಿಬಿ ಬೆನ್ನತ್ತಿ ಹಿಡಿದು ಚಾಲಕನಿಗೆ ಥಳಿಸಿದರು. ಪರಿಣಾಮವಾಗಿ ಬಿಹಾರ ಮೂಲದ ಜೆಸಿಬಿ ಚಾಲಕ ರಾಜ್ಕುಮಾರ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಆಗಮಿಸಿ ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಜ್ಕುಮಾರ್., ಕುಣಿಗಲ್ ಮೂಲದವರಿಗೆ ಸೇರಿದ ಜೆಸಿಬಿ ಚಾಲಕನಾಗಿದ್ದಾನೆ. ಮಂಡ್ಯ ಜಿಲ್ಲೆ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


























