ಮಂಗಳೂರು : ಅನ್ಯಕೋಮಿನ ಜೋಡಿಯನ್ನು ಬಜರಂಗದಳದ ಕಾರ್ಯಕರ್ತರು ತಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮೊರ್ಗನ್ಸ್ ಗೇಟ್ ಬಳಿ ನಡೆದಿದೆ.
ಅನ್ಯಕೋಮಿನ ಯುವಕನೊಂದಿಗೆ ಚಿಕ್ಕಮಗಳೂರಿನ ಯುವತಿ ಸುತ್ತಾಡುತ್ತಿದ್ದಾಗ ತಡೆದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆನ್ನಲಾಗಿದೆ.
ಮಂಕಿ ಸ್ಟಾಂಡ್ ನಿವಾಸಿ ಅನ್ಯಕೋಮಿನ ಯುವಕನೊಂದಿಗೆ ಚಿಕ್ಕಮಗಳೂರಿನ ಯುವತಿ ಸುತ್ತಾಡುತ್ತಿದ್ದಳು. ಇವರಿಬ್ಬರು ಮಂಕಿ ಸ್ಟಾಂಡ್ ನ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ, ಇಂದು ಸ್ಕೂಟರ್ನಲ್ಲಿ ಇವರಿಬ್ಬರು ಸುತ್ತಾಟ ನಡೆಸುತ್ತಿರುವುದನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರು ಬೆನ್ನಟ್ಟಿದ್ದಾರೆ ಎಂದು ವರದಿಯಾಗಿದೆ.
ಮಂಕಿಸ್ಟೆಂಡ್ ಬಳಿ ಸ್ಕೂಟರ್ ಅಡ್ಡ ಹಾಕಿದ ಕಾರ್ಯಕರ್ತರು ಜೋಡಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಎರಡೂ ಕೋಮಿನ ಯುವಕರು ಸ್ಥಳದಲ್ಲಿ ಜಮಾಯಿಸಿದ್ದು, ತಂಡಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಠಾಣೆಯ ಪೊಲೀಸರು ಗುಂಪು ಚದುರಿಸಿ ಅನ್ಯಕೋಮಿನ ಜೋಡಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.