ಪುತ್ತೂರು : ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಈಗಲೇ ಸಜ್ಜಾಗಬೇಕು ಎಂದು ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಹೇಳಿದರು.
ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಗರ ಕಾಂಗ್ರೆಸ್ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾರ್ಯಕರ್ತರ ಪರಿಶ್ರಮದಿಂದಾಗಿ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ನಮಗೆ ಗೆಲುವಾಯಿತು. ಇನ್ನು ಬರುವ ಲೋಕಸಭೆ ಹಾಗೂ ನಗರಸಭೆಯ 2 ಸ್ಥಾನಕ್ಕೆ ಉಪ – ಚುನಾವಣೆ ನಡೆಯಲಿದೆ, ಅದನ್ನು ಗೆಲ್ಲಲು ಕಾರ್ಯಕರ್ತರು ಈಗಲೇ ಕೆಲಸ ಪ್ರಾರಂಭಿಸಬೇಕು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಅಲಿ ಮಾತನಾಡಿ, ಕಳೆದ 6 ತಿಂಗಳಿಂದ ನಾವು ಗೆಲುವಿನ ಸಂಭ್ರಮದಲ್ಲಿದ್ದೇವೆ. ಗೆಲುವಿನ ಸಂಭ್ರಮದಲ್ಲಿ ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ಮರೆಯಬಾರದು, ಜನ ಸಾಮಾನ್ಯರ ಬದುಕಿನ ಅನುಕೂಲಕ್ಕಾಗಿ ಕಾಂಗ್ರೆಸ್ ಸರಕಾರ ಹಲವಾರು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ, ಜನರಿಗೆ ಇದರ ಪ್ರಯೋಜನ ತಲುಪಿದೆಯೇ ಎಂದು ನೋಡಬೇಕಾದ ಜವಾಬ್ದಾರಿ ಬೂತ್ ಅಧ್ಯಕ್ಷ ಮತ್ತು ಕಾರ್ಯಕರ್ತರದ್ದು, ಕಾಂಗ್ರೆಸ್ ನ ಜನ ಉಪಯೋಗಿ ಕಾರ್ಯಕ್ರಮ ಆಗಿರುವ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಪಕ್ಷ ಶತಾಯ ಗತಾಯ ವಿರೋಧಿಸುತ್ತಿದೆ, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಈ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಖಂಡಿತ ನಿಲ್ಲಿಸುತ್ತದೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದ ಅಲಿಯವರು ಶಾಸಕ ಅಶೋಕ್ ಕುಮಾರ್ ರೈ ಯವರು ಪುತ್ತೂರಿನ ಸರ್ವಾಂರ್ಗಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
ನಗರದ ವಾರ್ಡ್ ಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಲು ಬೂತ್ ಅಧ್ಯಕ್ಷರುಗಳಿಂದ ಅಗತ್ಯ ಕಾಮಗಾರಿಗಳ ಪಟ್ಟಿ ಕೊಡಲು ಹೇಳಿದ್ದಾರೆ. ಈ ರೀತಿ ಕಾರ್ಯಕರ್ತರ ಮಾತಿಗೆ ಮನ್ನಣೆ ಕೊಡುವ ಕೆಲಸ ಅಶೋಕ್ ಕುಮಾರ್ ರೈ ಯವರಿಂದ ಆಗುತ್ತಿದೆ. ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಬೇಕು, ನಮ್ಮ ಪಕ್ಷದ ಕೌನ್ಸಿಲರು ಇಲ್ಲದ ವಾರ್ಡ್ ಗಳಲ್ಲಿ ಬೂತ್ ಅಧ್ಯಕ್ಷರುಗಳೇ ಕೌನ್ಸಿಲರುಗಳ ರೀತಿ ಕೆಲಸ ಮಾಡಬೇಕು, ವಾರ್ಡ್ ಗಳಲ್ಲಿ ಸಮಸ್ಯೆಗಳು ಏನಿದ್ದರೂ ಗಮನಕ್ಕೆ ತನ್ನಿ ಶಾಸಕರ ಮೂಲಕ ಅದನ್ನು ಪರಿಹರಿಸುವ ಕೆಲಸ ಮಾಡುವ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶಕೂರು ಹಾಜಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಬೂತ್ ಅಧ್ಯಕ್ಷರುಗಳಿಗೆ ಹಾಗೂ ನಗರ ಕಾಂಗ್ರೆಸ್ ಪದಾಧಿಕಾರಿಗಳಿಗೆ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ಕಲ್ಪಿಸಲಾಗಿತ್ತು, ಇದರಂತೆ ಮಂಜುನಾಥ್ ಕೆಮ್ಮಾಯಿ, ಹರೀಶ್ ಆಚಾರ್ಯ ಕೃಷ್ಣನಗರ, ಇಸ್ಮಾಯಿಲ್ ಬೊಲುವಾರು, ವಿಲ್ಮಾ ಗೊನ್ಸಾಲ್ವಿಸ್ ಬನ್ನೂರು, ಶಾಹಿರಬಾನು ಬನ್ನೂರು, ಈಶ್ವರ ನಾಯ್ಕ್ ಸಾಮೇತಡ್ಕ, ದಿನೇಶ್ ಕಾಮತ್ ಸಾಮೇತಡ್ಕ,, ಇಸ್ಮಾಯಿಲ್ ಸಾಲ್ಮರ, ವಾಲ್ಟರ್ ಸಿಕ್ವೆರಾ, ಕೃಷ್ಣಪ್ಪ ಪೂಜಾರಿ ನೆಕ್ಕರೆ, ಕಲಾವಿದ ಕೃಷ್ಣಪ್ಪ, ಸೂಫಿ ಬಪ್ಪಳಿಗೆ,ರಶೀದ್ ಮುರ ಮುಂತಾದವರು ತಮ್ಮ ಅಭಿಪ್ರಾಯ ತಿಳಿಸಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ಪಿ ವಿ, ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ಡಯಾಸ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ನಗರಸಭಾ ಮಾಜಿ ಅಧ್ಯಕ್ಷರಾದ ಜಯಂತಿ ಬಲ್ನಾಡ್,ನಗರ ಸಭಾ ಸದಸ್ಯರಾದ ರೋಬಿನ್ ತಾವ್ರೊ,ಹಾಗೂ ಶೈಲಾ ಪೈ ಉಪಸ್ಥಿತರಿದ್ದರು.
ನಗರ ಕಾಂಗ್ರೆಸ್ ಕಾರ್ಯದರ್ಶಿ ಮೌರಿಸ್ ಕುತಿನ್ಹ ಸ್ವಾಗತಿಸಿ, ಉಪಾಧ್ಯಕ್ಷ ಮುಕೇಶ್ ಕೆಮ್ಮಿಂಜೆ ವಂದಿಸಿದರು. ಕಚೇರಿ ಕಾರ್ಯದರ್ಶಿ ಸಿರಿಲ್ ರೋಡ್ರಿಗಸ್ ಸಹಕರಿಸಿದರು. ಈ ಸಭೆಯಲ್ಲಿ ನಗರ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ನಗರ ವ್ಯಾಪ್ತಿಯ ಬೂತ್ ಅಧ್ಯಕ್ಷರುಗಳು ಭಾಗವಹಿಸಿದ್ದರು.