ಮಡಿಕೇರಿ : ಕೇರಳದ ಮಾಜಿ ಯೋಧರೊಬ್ಬರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ 8 ಲಕ್ಷ ರೂ. ನಗದು ಹಾಗೂ 2,00,000 ರೂ. ಚೆಕ್ ಪಡೆದು ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಕೊಡಗು ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ನಿವಾಸಿ ಅಬ್ದುಲ್ ಬಶೀರ್ (29), ಕಡಬದ ನಿವಾಸಿ ಸಾಧಿಕ್ (30) ಹಾಗೂ ಮತ್ತೊಬ್ಬ ಆರೋಪಿ ಫೈಸಲ್, ಈಗಾಗಲೇ ಬೇರೊಂದು ಪ್ರಕರಣದಲ್ಲಿ ಮೈಸೂರಿನಲ್ಲಿ ಬಂಧನವಾಗಿದ್ದಾನೆ. ಬಂಧಿತ ಆರೋಪಿಗಳಿಂದ ಮೊಬೈಲ್, ನಗದು ಹಾಗೂ ಚೆಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ಅಮೀರ್ ತಲೆಮರೆಸಿಕೊಂಡಿದ್ದಾನೆ.

ಏನಿದು ಘಟನೆ.!??
ಕೇರಳದ ಎರ್ನಾಕುಲಂ ಜಿಲ್ಲೆಯ ನಿವಾಸಿ ಮಾಜಿ ಯೋಧ ಜಾನ್ ಮೇಥಿವ್ (64) ಅವರಿಗೆ ಮದುವೆಯಾಗಲು ಒಳ್ಳೆಯ ಒಂದು ಹುಡುಗಿ ಇದ್ದಾಳೆ ಎಂದು ಹೇಳಿ ಅವರನ್ನು ನವೆಂಬರ್ 26ರಂದು ಮಡಿಕೇರಿಯ ಹೋಂ ಸ್ಟೇ ಒಂದಕ್ಕೆ ಕರೆಸಿಕೊಂಡು ಅಲ್ಲಿ ಮಹಿಳೆ ಒಬ್ಬಳನ್ನು ತೋರಿಸಿ ಇವರನ್ನು ವಿವಾಹವಾಗುವಂತೆ ಹೇಳಿ ಅದೇ ಹೋಂ ಸ್ಟೇನಲ್ಲಿ ಆರೋಪಿಗಳು ಮದುವೆ ಮಾಡಿಸಿ ಇಬ್ಬರನ್ನೂ ಹೋಂ ಸ್ಟೇಯಲ್ಲಿ ಅಂದು ತಂಗಲು ಅವಕಾಶ ನೀಡಿದ್ದರು. ನಂತರ ಸಂಜೆ ಆರೋಪಿಗಳು ಇವರಿಬ್ಬರ ಜೊತೆಯಲ್ಲಿರುವ ಮದುವೆಯ ಫೋಟೋವನ್ನು ಜಾನ್ ಅವರಿಗೆ ತೋರಿಸಿ ಬ್ಲ್ಯಾಕ್ಮೇಲ್ ಮಾಡಿ ಒಟ್ಟು 8 ಲಕ್ಷ ನಗದು ಹಾಗೂ 2 ಲಕ್ಷ ರೂ. ಚೆಕ್ ಅನ್ನು ಪಡೆದು ಆರೋಪಿಗಳು ಪರಾರಿಯಾಗಿದ್ದರು.
ಮೋಸ ಹೋದ ಮಾಜಿ ಯೋಧ ಜಾನ್ ಮಡಿಕೇರಿ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಂದ ನಗದು ಹಾಗೂ 3 ಮೊಬೈಲ್, ಚೆಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಮಡಿಕೇರಿ ಡಿವೈಎಸ್ಪಿ ಬಿ.ಜಗದೀಶ್ ಎಂ, ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ಡಿಸಿಆರ್ಬಿ, ಇನ್ಸ್ಪೆಕ್ಟರ್ ಐಪಿ ಮೇದಪ್ಪ, ನಗರ ಠಾಣಾಧಿಕಾರಿ ಲೋಕೇಶ್, ಪೊಲೀಸ್ ಸಿಬ್ಬಂದಿ ಹಾಗೂ ಮಹಿಳಾ ಸಿಬ್ಬಂದಿ ಭಾಗವಹಿಸಿದ್ದರು.

























