ಪುತ್ತೂರು : ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರದ ನೇತೃತ್ವದಲ್ಲಿ ಡಿ.24 ಮತ್ತು 25 ರಂದು ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಲಾಗಿದೆಯೇ ಹೊರತು ದೇವಳದ ಸಹಭಾಗಿತ್ವ ಇಲ್ಲ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳು ಅಧಿಕೃತ ಪ್ರಕಟಣೆಯ ಮೂಲಕ ಹೇಳಿಕೆ ನೀಡಿದ್ದಾರೆ.

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮತ್ತು ಪುತ್ತಿಲ ಪರಿವಾರ ಪುತ್ತೂರು ಇವರ ಆಶ್ರಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಗೌರವ ಸಲಹೆಗಾರರಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ವ್ಯವಸ್ಥಾಪನಾ ಸಮಿತಿಯ ಕೇಶವ ಪ್ರಸಾದ ಮುಳಿಯ, ಅಧ್ಯಕ್ಷರು, ಸರ್ವ ಸದಸ್ಯರುಗಳು ವ್ಯವಸ್ಥಾಪನಾ ಸಮಿತಿ ಮತ್ತು ತಂತ್ರಿಗಳು, ಅರ್ಚಕ ವೃಂದ, ನೌಕರ ವರ್ಗ ಎಂದು ವ್ಯವಸ್ಥಾಪನಾ ಸಮಿತಿಯ ಹಾಗೂ ಕಾರ್ಯನಿರ್ವಹಣಾಧಿಕಾರಿಯ ಪೂರ್ವಾನುಮತಿ ಯಾ ಗಮನಕ್ಕೆ ತಾರದೇ ಮುದ್ರಣಗೊಂಡ ಬಗ್ಗೆ ಗಮನಿಸಲಾಯಿತು.

ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸನಾತನ ಸಮಾಗಮ, ಹಿಂದೂ ಧಾರ್ಮಿಕ ಆಚರಣೆ/ಕಾರ್ಯಕ್ರಮ ಎಂಬ ಕಾರಣವಾಗಿ ಶ್ರೀ ದೇವಳದ ಗದ್ದೆ ಮೈದಾನದಲ್ಲಿ ಸ್ಥಳಾವಕಾಶವನ್ನು ಮನವಿಯ ಮೇರೆಗೆ ಒದಗಿಸಲಾಗಿದೆಯೇ ಹೊರತು ಶ್ರೀ ದೇವಳದ ಸಹಭಾಗಿತ್ವ ಇರುವುದಿಲ್ಲವೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸರ್ವ ಸದಸ್ಯರುಗಳು ಹಾಗೂ ಕಾರ್ಯ ನಿರ್ವಹಣಾಧಿಕಾರಿ ಅಧಿಕೃತ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.


























