ಜನವರಿ 22ಕ್ಕೆ ಅಯೋಧ್ಯೆ ರಾಮಮಂದಿರ ಲೋರ್ಕಾಪಣೆಗೊಳ್ಳಲಿದ್ದು, ಅನೇಕ ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಚಾಲನೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಇಂದು ಅಯೋಧ್ಯೆಯಲ್ಲಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದರು.
ಹಾಗೂ ಹೊಸ ರೈಲುಗಳು ಮತ್ತು ನವೀಕರಿಸಿದ ರೈಲು ನಿಲ್ದಾಣ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಮೆಗಾ ರೋಡ್ ಶೋ ನಡೆಸಿದರು. ಮೋದಿ ಅವರನ್ನು ಸ್ವಾಗತಿಸಲು ಜನರು ರಸ್ತೆಗಳಲ್ಲಿ ನಿಂತು ಜಯಘೋಷಗಳು ಹಾಗೂ ಹೂವಿನ ಮಳೆಗರೆದರು. ಈ ಸಂದರ್ಭದಲ್ಲಿ ಒಂದು ವಿಶೇಷ ವಿಚಾರ ಕಂಡು ಬಂದಿದೆ ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬಾಬರಿ ಮಸೀದಿಯ ಮುಖ್ಯ ಅರ್ಜಿದಾರರಾಗಿದ್ದ ಇಕ್ಬಾಲ್ ಅನ್ಸಾರಿ ಅವರು ಪ್ರಧಾನಿ ಮೋದಿ ಸ್ವಾಗತಕ್ಕೆ ಹೂವನ್ನು ಹಿಡಿದುಕೊಂಡು ಕಾಯುತ್ತಿರುವ ಹಾಗೂ ಹೂ ಚೆಲ್ಲಿ ಸ್ವಾಗತಿಸಿದ ವೀಡಿಯೋ ಭಾರೀ ವೈರಲ್ ಆಗಿದೆ.
ಈ ಬಗ್ಗೆ ಇಕ್ಬಾಲ್ ಅನ್ಸಾರಿ ಮಾತನಾಡಿದ್ದು, ಪ್ರಧಾನಿ ಮೋದಿ ಅವರು ಎಲ್ಲರಿಗೂ ಸೇರಿದವರು, ಅವರಿಂದ ಅಯೋಧ್ಯೆ ಬೇಕಾದಷ್ಟು ಅಭಿವೃದ್ಧಿಯಾಗಿದೆ. ಅಯೋಧ್ಯೆಯಲ್ಲಿ ಒಂದು ಸಣ್ಣ ರೈಲು ನಿಲ್ದಾಣ ಇತ್ತು. ಆದರೆ ಇಂದು ಅದರ ಮರುನಿರ್ಮಾಣ ಅದ್ಭುತವಾಗಿದೆ. ಅಯೋಧ್ಯೆಯಲ್ಲಿ ಒಂದು ವಿಮಾನ ನಿಲ್ದಾಣ ಇರಲಿಲ್ಲ. ಆದರೆ ಇದೀಗ ಸುಂದರ ಮತ್ತು ದೊಡ್ಡ ವಿಮಾನ ನಿಲ್ದಾಣ ಬಂದಿದೆ ಎಂದು ಹೇಳಿದರು. ಇನ್ನು ರಾಮ ಪ್ರಾಣ ಪ್ರತಿಷ್ಠೆಗೆ ಹೋಗುತ್ತೀರಾ ಎಂದು ಕೇಳಿದಕ್ಕೆ, ನನಗೆ ಆಹ್ವಾನ ಬಂದರೆ ಖಂಡಿತ ಹೋಗುತ್ತೇನೆ, ರಾಮ ಮಂದಿರದ ಕಾರ್ಯಕ್ರಮಕ್ಕೆ ಹೋಗಲು ತುಂಬಾ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಮೋದಿ ಅವರನ್ನು ಸ್ವಾಗತಿಸಲು ಬಂದಿರುವ ಬಗ್ಗೆ ಕೇಳಿದಾಗ, ಮೋದಿ ಅವರು ನಮ್ಮ ಊರಿಗೆ ಬಂದಿದ್ದಾರೆ ಅವರನ್ನು ಸ್ವಾಗತಿಸುವುದು ನಮ್ಮ ಕರ್ತವ್ಯವಾಗಿದೆ. ಇದೊಂದು ಹಬ್ಬವಾಗಿದೆ, ಇಡಿ ದೇಶವೆ ಇದನ್ನು ಆಚರಣೆ ಮಾಡಬೇಕು. ಇಂತಹ ಕ್ಷಣದಲ್ಲಿ ಎಲ್ಲರೂ ಒಟ್ಟಾಗಬೇಕು. ನಾವು ಒಟ್ಟಿಗೆ ಒಂದು ರಾಷ್ಟ್ರದಲ್ಲಿ ವಾಸಿಸುವವರು, ಹಾಗಾಗಿ ನಾವು ಧಾರ್ಮಿಕ ವಿಚಾರದಲ್ಲಿ ಒಗ್ಗಟಿನಲ್ಲಿದ್ದೇವೆ ಎಂಬುದನ್ನು ತೋರಿಸಬೇಕಿದೆ. ಈ ಅದ್ಧೂರಿ ಆಚರಣೆಗೆ ದೇಶದ ಪ್ರಧಾನಿ ಬಂದಿರುವುದನ್ನು ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ.


























