ಕುಂದಾಪುರದ ಯುವಕ ಜರ್ಮನಿ ಮೂಲದ ಯುವತಿಯನ್ನ ಹಿಂದೂ ಪದ್ಧತಿಯಂತೆ ವಿವಾಹವಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಈ ಅಪೂರ್ವ ಕ್ಷಣಕ್ಕೆ ಸಿದ್ದಾಪುರ ಗ್ರಾಮಸ್ಥರು ಸಾಕ್ಷಿಯಾದರು.
ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಆಜ್ರಿಯ ಕರಿಮನೆ ಸುವರ್ಣ ಮತ್ತು ಪಂಜು ಪೂಜಾರಿ ದಂಪತಿಯ ಪುತ್ರ ಚಂದನ್ ಹಾಗೂ ಜರ್ಮನಿಯ ಪೆಟ್ರ ಶ್ರೂಆರ್ ಮತ್ತು ಪೀಟರ್ ಶ್ರೂಆರ್ ಮುನಿಸ್ತರ್ ಯುನಿಕಬ್ ದಂಪತಿಯ ಪುತ್ರಿ ಕಾರಿನ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವ ಜೋಡಿ.

ಹಿಂದೂ ಸಂಪ್ರದಾಯದಂತೆ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಮದುವೆಗೆ ಸಿದ್ದಾಪುರ ಗ್ರಾಮಸ್ಥರು ಹಾಗೂ ಎರಡೂ ಕುಟುಂಬಗಳ ಹಿರಿಯರು ಮದುವೆಗೆ ಸಾಕ್ಷಿಯಾದರು.
ಚಂದನ್ ಅವರು ಜರ್ಮನಿಯಲ್ಲಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಶಿಕ್ಷಕಿಯಾಗಿರುವ ಕಾರಿನ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೇಮದ ಬಗ್ಗೆ ತಮ್ಮ ಕುಟುಂಬಿಕರೊಂದಿಗೆ ಮಾತುಕತೆ ಮಾಡಿದ್ದು ಎರಡು ಕುಟುಂಬಗಳು ಪರಸ್ಪರ ಚರ್ಚಿಸಿ ಮದುವೆಗೆ ಸಮ್ಮತಿಸಿದ್ದರು. ಅದರಂತೆ ಇವರ ವಿವಾಹ ನೆರವೇರಿದ್ದು, ಎರಡು ಕಡೆಯ ಬಂಧು-ಮಿತ್ರರು, ಹಿತೈಷಿಗಳು ಪಾಲ್ಗೊಂಡು ನವಜೋಡಿಗಳಿಗೆ ಶುಭಹಾರೈಸಿದರು.