ದೆಹಲಿ-ಗೋವಾ ಇಂಡಿಗೋ ವಿಮಾನದ ಸಹ-ಕ್ಯಾಪ್ಟನ್ಗೆ ಪ್ರಯಾಣಿಕನೊಬ್ಬ ಹಲ್ಲೆ ಮಾಡಿ ರಂಪಾಟ ಮಾಡಿದ್ದಾನೆ. ಹಲ್ಲೆ ನಡೆಸಿರುವ ಪ್ರಯಾಣಿಕನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆಗಿದ್ದೇನು..?
ಚಳಿಗಾಲ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಿಪರಿತ ಚಳಿ ಮತ್ತು ಮಂಜು ಬೀಳುತ್ತಿದೆ. ಪರಿಣಾಮ ರೈಲು ಸಂಚಾರ, ವಿಮಾನಗಳ ಹಾರಾಟ, ವಾಹನಗಳ ಸಂಚಾರದಲ್ಲಿ ವ್ಯತ್ಯಯ ಆಗುತ್ತಿದೆ. ಅಂತೆಯೇ ಇಂಡಿಗೋ ವಿಮಾನ ದೆಹಲಿಯಿಂದ ಗೋವಾಗೆ ಹೋಗೋದು ವಿಳಂಬ ಆಗಿದೆ. ಅದಾಗಲೇ ಬರೋಬ್ಬರಿ 13 ಗಂಟೆಗಳು ತಡವಾಗಿತ್ತು ಎನ್ನಲಾಗಿದೆ.
ಹವಾಮಾನ ವೈಪರಿತ್ಯದಿಂದ ವಿಮಾನದ ಹಾರಾಟ ಕಷ್ಟವಾದ ಹಿನ್ನೆಲೆಯಲ್ಲಿ ವಿಮಾನದ ಪೈಲೆಟ್, ಮಂಜಿನ ಕಾರಣ ವಿಮಾನ ಹಾರಾಟದಲ್ಲಿ ವ್ಯತ್ಯಯ ಆಗಲಿದೆ ಎಂದು ಅನೌನ್ಸ್ ಮಾಡಲು ಬಂದಿದ್ದರು. ಈ ವೇಳೆ ತಾಳ್ಮೆ ಕಳೆದುಕೊಂಡ ಪ್ರಯಾಣಿಕ ಪೈಲೆಟ್ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಅಲ್ಲಿದ್ದವರು ಆತನನ್ನು ತಡೆದಿದ್ದಾರೆ. ಓಡಿ ಬಂದು ಮುಖಕ್ಕೆ ಪಂಚ್ ನೀಡುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶಶಿ ಕಟೆರಿಯಾ ಹಲ್ಲೆ ನಡೆಸಿದ ಪ್ರಯಾಣಿಕ. ಕೋ ಪೈಲಟ್ ಅನೂಪ್ ಕುಮಾರ್ ಮೇಲೆ ಹಲ್ಲೆಯಾಗಿದೆ.
ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಇತರೆ ಪ್ರಯಾಣಿಕರು ವೀಡಿಯೋ ಮಾಡಿದ್ದಾರೆ. ದೆಹಲಿಯಲ್ಲಿ ಮಂಜಿನ ಕಾರಣದಿಂದ 110 ವಿಮಾನಗಳ ಸಂಚಾರದಲ್ಲಿ ವಿಳಂಬ ಆಗಿದೆ. 79 ವಿಮಾನ ಸಂಚಾರ ರದ್ದಾಗಿದೆ.

























