ಪುತ್ತೂರು : ಜಾಗದ ವಿಚಾರವಾಗಿ ನಡೆದ ತಕರಾರು ಹಲ್ಲೆ ವಿಚಾರದಲ್ಲಿ ಪುತ್ತಿಲ ಪರಿವಾರದ ಹೆಸರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಈ ವಿಚಾರವನ್ನು ಪುತ್ತಿಲ ಪರಿವಾರ ಖಂಡಿಸಿದೆ.
500 ವರ್ಷಗಳಿಂದ ಹಿಂದೂ ಸಮಾಜ ಕಾತರದಿಂದ ಕಾಯುತ್ತಿರುವ ಅಮೋಘ ಕ್ಷಣ ಜ.22ರ ಅಯೋಧ್ಯೆಯ ಶ್ರೀ ರಾಮಮಂದಿರ ಪ್ರತಿಷ್ಠಾಪನೆ. ಮಂತ್ರಾಕ್ಷತೆ ವಿತರಿಸುವುದು ಸಹಿತ ರಾಮಮಂದಿರಕ್ಕೆ ಶುಭಕೋರಿ ಪುತ್ತೂರಿನಲ್ಲಿ ಪ್ರಪ್ರಥಮ 3ಡಿ ಬ್ಯಾನರ್ ಅಳವಡಿಸಿ ರಾಷ್ಟ್ರೀಯ ಹಬ್ಬದಂತೆ ಮನೆ ಮನೆಗಳಲ್ಲಿ ರಾಮಮಂದಿರ ಪ್ರತಿಷ್ಠಾಪನೆಯನ್ನು ಆಚರಿಸಲು ಪುತ್ತಿಲ ಪರಿವಾರ ಕಾಯುತ್ತಿದೆ.
ಮುಂಡೂರು ಗ್ರಾಮದಲ್ಲಿ ನಡೆದ ಜಾಗದ ತಕರಾರಿಗೆ ಪುತ್ತಿಲ ಪರಿವಾರವನ್ನು ಅದರಲ್ಲೂ ರಾಮಮಂದಿರದ ಮಂತ್ರಾಕ್ಷತೆಯನ್ನು ಬಳಸಿಕೊಂಡು ಸುಳ್ಳು ಅಪವಾದ ಮಾಡಿರುವುದು ತೀರಾ ಖಂಡನೀಯ.
ಜಾಗದ ಗಲಾಟೆಗೆ ನಡೆದ ಘಟನೆ ಎಂದು ಪೊಲೀಸ್ ಎಫ್ಐಆರ್ ನಲ್ಲೇ ಉಲ್ಲೇಖ ಆಗಿದ್ದು, ಈ ಬಗ್ಗೆ ತಕ್ಷಣ ಸ್ಪಷ್ಟಿಕರಣ ಕೊಟ್ಟು ಗೊಂದಲ ನಿವಾರಿಸಿದ ದಕ್ಷಿಣ ಕನ್ನಡ ಎಸ್ಪಿ ರಿಷ್ಶಂತ್ ಅವರಿಗೆ ಧನ್ಯವಾದ ಎಂದು ಪುತ್ತಿಲ ಪರಿವಾರ ಹೇಳಿದೆ.
ದುರುದ್ದೇಶದಿಂದ ಸಮಾಜದಲ್ಲಿ ತಪ್ಪು ಅಭಿಪ್ರಾಯ, ತೇಜೋವಧೆ, ಧಾರ್ಮಿಕ ಭಾವನೆಗೆ ಧಕ್ಕೆ ತಂದು ಪ್ರಕರಣವನ್ನು ತಿರುಚಿದವರ ವಿರುದ್ದ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪೊಲೀಸ್ ಇಲಾಖೆಯನ್ನು ಪುತ್ತಿಲ ಪರಿವಾರ ವಿನಂತಿಸಿದೆ.


























