ತೀರ್ಥಹಳ್ಳಿ : ಎಂಟು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನಾಲೂರು ಕೊಳ್ತಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ನಡೆದಿದೆ.
ಶಮಿತಾ ಬಿ.ಯು (24) ಮೃತ ವಿವಾಹಿತೆ.
ಶಮಿತಾ ಅವರ ಪತಿ ವಿದ್ಯಾರ್ಥ್ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ.
ಕಳೆದ ಮಾರ್ಚ್ ನಲ್ಲಿ ಶಮಿತಾ ಹಾಗೂ ವಿದ್ಯಾರ್ಥ್ ಪ್ರೀತಿಸಿ ಮದುವೆಯಾಗಿದ್ದರು. ಮಂಗಳವಾರ ರಾತ್ರಿ ಅತ್ತೆ ಮಾವನಿಗೆ ತಿಳಿಸಿ ಶಮಿತಾ ರಾತ್ರಿ ಊಟ ಮಾಡಿ ಮಲಗಲು ಮನೆ ಉಪ್ಪರಿಗೆ ಮೇಲೆ ತೆರಳಿದ್ದರು. ಆದರೆ ಬುಧವಾರ ಬೆಳಗ್ಗೆ ಬಾಗಿಲು ತೆರೆಯದಿದ್ದ ಹಿನ್ನಲೆ ಕುಟುಂಬದವರು, ಕೆಲಸದವರು ಕಿಟಕಿಯಿಂದ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಯುವತಿಯ ಪೋಷಕರು ಆಗಮಿಸಿದ ನಂತರ ಬಾಗಿಲು ಒಡೆಯಲಾಗಿದೆ. ಮೃತದೇಹದ ಬಳಿ ಡೆತ್ ನೋಟ್ ಲಭ್ಯವಾಗಿದ್ದು, ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ ಎನ್ನಲಾಗಿದೆ.


























