ಗುಜರಾತ್ : ಪ್ರವಾಸಕ್ಕೆ ಅಂತ ಬಂದು ಬೋಟಿಂಗ್ ಎಂಜಾಯ್ ಮಾಡ್ತಿದ್ದ ಶಾಲಾ ಮಕ್ಕಳು, ಘೋರ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಕೆರೆಯಲ್ಲಿ ಬೋಟ್ ರೂಪದಲ್ಲಿ ಬಂದ ಜವರಾಯ 14 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಬಲಿ ಪಡೆದಿದ್ದಾನೆ.
ಬೋಟಿಂಗ್ ಮಾಡುತ್ತಿದ್ದಾಗಲೇ ಈ ಘಟನೆ ನಡೆದಿದ್ದು, ಗುತ್ತಿಗೆ ಪಡೆದಿದ್ದ ಸಂಸ್ಥೆಯ ನಿರ್ಲಕ್ಷ್ಯವೂ ಎದ್ದು ಕಾಣಿಸುತ್ತಿದೆ.
ಗುಜರಾತ್ಗೆ ಮತ್ತೊಂದು ಜಲಾಘಾತ ತಟ್ಟಿದೆ. ಮೋರ್ಬಿ ಸೇತುವೆ ಘಟನೆ ನಡೆದು ಕೆಲವೇ ತಿಂಗಳು ಗತಿಸಿದೆ. ಅಷ್ಟೊತ್ತಿಗಾಗಲೇ ವಡೋದರಾದ ಹರ್ನಿ ಸರೋವರದಲ್ಲಿ ಭಾರೀ ದುರಂತವೊಂದು ಸಂಭವಿಸಿದೆ. ಪ್ರವಾಸಕ್ಕೆ ಅಂತ ಬಂದು ಬೋಟಿಂಗ್ ಎಂಜಾಯ್ ಮಾಡ್ತಿದ್ದ ಶಾಲಾ ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬೋಟಿಂಗ್ ಮಾಡ್ತಿದ್ದಾಗಲೇ ಬೋಟ್ ಮುಳುಗಿದೆ.
14 ಶಾಲಾ ಮಕ್ಕಳ ಶವವನ್ನ ಹೊರಗೆ ತೆಗೆದ ರಕ್ಷಣಾ ಸಿಬ್ಬಂದಿ
ಖಾಸಗಿ ಶಾಲಾ ಮಕ್ಕಳು ಪ್ರವಾಸಕ್ಕೆಂದು ತೆರಳಿದ್ದಾಗ ಗುಜರಾತ್ನಲ್ಲಿ ಭೀಕರ ದೋಣಿ ದುರಂತ ಸಂಭವಿಸಿದೆ.. ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ದೋಣಿ ವಡೋದರಾದ ಹರ್ನಿ ಕೆರೆಯಲ್ಲಿ ಮಗುಚಿ ಬಿದ್ದಿದೆ. ಘಟನೆಯಲ್ಲಿ 14 ಮಕ್ಕಳು ಸೇರಿ ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ.
27 ಶಾಲಾ ಮಕ್ಕಳು ಪ್ರವಾಸಕ್ಕೆಂದು ಹರ್ನಿ ಕೆರೆಯಲ್ಲಿ ಪ್ರಯಾಣ ಮಾಡ್ತಿದ್ರು. ಆದ್ರೆ, ಮಾರ್ಗ ಮಧ್ಯೆ ದೋಣಿ ಅಪಾಯಕ್ಕೆ ಗುರಿಯಾಗಿದೆ.. ತೆರಳುತ್ತಿದ್ದ ದೋಣಿ ಭಾರ ತಾಳಲಾಗದೇ ಕೆರೆಯಲ್ಲಿ ಮುಗುಚಿ ಬಿದ್ದಿದೆ. 14 ಶಾಲಾ ಮಕ್ಕಳ ಶವವನ್ನ ಹೊರಗೆ ತೆಗೆಯಲಾಗಿದೆ. 27 ಶಾಲಾ ವಿದ್ಯಾರ್ಥಿಗಳ ಪೈಕಿ 21 ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಆದ್ರೆ, ಕೆರೆಯಲ್ಲಿ 6 ವಿದ್ಯಾರ್ಥಿಗಳು ನಾಪತ್ತೆ ಆಗಿದ್ದು, ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರು ವಿದ್ಯಾರ್ಥಿಗಳಿಗಾಗಿ ಶೋಧ ನಡೆಯುತ್ತಿದೆ.
ಒಟ್ಟು ಏಳು ಮಕ್ಕಳನ್ನ ರಕ್ಷಿಸಲಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೆ, ಆಸ್ಪತ್ರೆಗೆ ದಾಖಲಾದ ಶಾಲಾ ಮಕ್ಕಳ ಸ್ಥಿತಿಯು ಗಂಭೀರವಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಗುಜರಾತ್ ಸಿಎಂ ಭೂಪೇಂದ್ರ ಸಿಂಗ್ ಪಟೇಲ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಬಳಿಕ ಆಸ್ಪತ್ರೆಗೂ ಆಗಮಿಸಿ, ಸಂತ್ರಸ್ತರ ಕುಟುಂಬಸ್ಥರನ್ನ ಭೇಟಿ ಮಾಡಿದರು.
ದೋಣಿ ದುರಂತಕ್ಕೆ ಕಾರಣವೇನು..!??
ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಗೆ ಬರುವ ಈ ಕೆರೆಯು ಖಾಸಗಿ ಕಂಪನಿಯೊಂದಕ್ಕೆ ಬೋಟಿಂಗ್ಗಾಗಿ ಗುತ್ತಿಗೆ ನೀಡಿದೆ. ಆದರೆ, ಬೋಟ್ನ ಸಾಮರ್ಥ್ಯ 10 ರಿಂದ 12 ಮಕ್ಕಳಿದ್ದರೂ ಒಂದೇ ಬೋಟ್ನಲ್ಲಿ 20 ರಿಂದ 25 ಮಕ್ಕಳನ್ನು ಕೂರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಂತೆಯೆ ಹರ್ನಿಕೆರೆಯ ದೋಣಿಯಲ್ಲಿ 27 ವಿದ್ಯಾರ್ಥಿಗಳು ಪ್ರಯಾಣಿಸ್ತಿದ್ರು. ಆದ್ರೆ, ಯಾರೊಬ್ಬರು ಲೈಫ್ ಜಾಕೆಟ್ ಧರಿಸದೇ ದೋಣಿ ವಿಹಾರ ಮಾಡ್ತಿದ್ರು. ಕೆರೆಯಲ್ಲಿ ದೋಣಿ ಮಗುಚಿದ ತಕ್ಷಣ ರಕ್ಷಣೆಗೆ ಧಾವಿಸಿದ ಸಿಬ್ಬಂದಿ, ಕೆಲವರನ್ನ ರಕ್ಷಿಸಿದ್ದಾರೆ.
ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರ ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.


























