ಪುತ್ತೂರು : ತೆಂಕಿಲದಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕೇಂದ್ರವನ್ನು ಪುತ್ತೂರು ಶಾಸಕರಾದ ಅಶೋಕ್ ರೈಯವರು ಉದ್ಘಾಟಿಸಿದರು.

ಈ ಭಾಗದಲ್ಲಿ ಅಂಗನವಾಡಿ ಕಟ್ಟಡದ ಕೊರತೆ ಇರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು. ಸುಮಾರು 13 ಲಕ್ಷ ರೂ ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡದ ನಿರ್ಮಾಣ ಕಾರ್ಯ ನಡೆಸಲಾಗಿದೆ. ಸ್ಥಳೀಯರಾದ ಪ್ರಕಾಶ್ ಗೌಡ ಎಂಬವರು ಅಂಗನವಾಡಿಗೆ ಸ್ಥಳದಾನವನ್ನು ಮಾಡಿದ್ದರು.
ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕರು ಅಂಗನವಾಡಿಯಲ್ಲಿ ತಾಯಿಯ ಶಿಕ್ಷಣ ಮಕ್ಕಳಿಗೆ ದೊರೆಯುತ್ತಿದೆ. ಪೌಷ್ಠಿಕ ಆಹಾರದ ಜೊತೆಗೆ ಮಕ್ಕಳ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಗಳು ಅಂಗನವಾಡಿಗಳಲ್ಲಿ ಇದ್ದು ಪೋಷಕರು ಮಕ್ಕಳನ್ನು ಅಂಗನವಾಡಿಗೆ ದಾಖಲಿಸುವ ಮೂಲಕ ಕೇಂದ್ರಗಳನ್ನು ಉಳಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ರಾಜ್ಯ ಸರಕಾರದಿಂದ ಗುಣಮಟ್ಟದ ಆಹಾರ ಪುಟಾಣಿ ಮಕ್ಕಳಿಗೆ ನೀಡುತ್ತಿದ್ದು, ಪೌಷ್ಠಿಕ ಆಹಾರದ ಕೊರತೆ ಇರುವ ಮಕ್ಕಳಿಗೆ ಇದು ಪ್ರಯೋಜನವಾಗಲಿದೆ ಎಂದು ಹೇಳಿದರು.

ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರಭಟ್ ಮಾತನಾಡಿ, ತೆಂಕಿಲದಲ್ಲಿ ಅಂಗನವಾಡಿ ಕಟ್ಟಡಕ್ಕೆ ಜಾಗದ ಕೊರತೆ ಇತ್ತು ಪ್ರಕಾಶ್ ಗೌಡ ಅವರು ತನ್ನ ವರ್ಗ ಭೂಮಿಯನ್ನು ಕೇಂದ್ರಕ್ಕೆ ದಾನ ಮಾಡುವ ಮೂಲಕ ಉತ್ತಮ ಸಮಾಜ ಸೇವೆಯನ್ನು ಮಾಡಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದಾಲಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ರೇವತಿ, ಅಂಗನವಾಡಿ ಮೇಲ್ವಿಚಾರಕಿ ಜಲಜಾಕ್ಷಿ, ಶಶಿಕಲಾ ನಾಗೇಶ್, ಹಿರಿಯರಾದ ಮುತ್ತಕ್ಕ, ಅನಿಲ್ ಗೌಡ ತೆಂಕಿಲ ಮೊದಲಾದವರು ಉಪಸ್ಥಿತರಿದ್ದರು. ರತ್ನಾ ಸ್ವಾಗತಿಸಿ, ಪ್ರಶಾಂತಿ ವಂದಿಸಿದರು. ಜಯಂತಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ದಾನಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಗುತ್ತಿಗೆದಾರನ ವಿರುದ್ದ ದೂರು
ಸ್ಥಳೀಯರು ಅಂಗನವಾಡಿ ನಿರ್ಮಾಣ ಮಾಡಿದ ಗುತ್ತಿಗೆದಾರನ ವಿರುದ್ದ ಶಾಸಕರಲ್ಲಿ ದೂರು ನೀಡಿ ಅಂಗನವಾಡಿಗೆ ತೆರಳಲು ಮೆಟ್ಟಿಲುಗಳ ವ್ಯವಸ್ಥೆಯನ್ನು ಮಾಡದೆ ಇಲ್ಲಿರುವ ದ್ವಜಸ್ಥಂಬವನ್ನು ಕಿತ್ತು ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ. ನಗರಸಭಾ ಪೌರಾಯುಕ್ತರಿಗೆ ಕರೆ ಮಾಡಿದ ಶಾಸಕರು ಕೆಲಸ ಪೂರ್ತಿಮಾಡದೆ ಅರ್ಧಂಬರ್ಧ ಕಾಮಗಾರಿ ನಡೆಸಿದ್ದಾರೆ. ಕೆಲಸ ಪೂರ್ತಿ ಮಾಡದೇ ಇದ್ದಲ್ಲಿ ಬಿಲ್ ಪೆಂಡಿಂಗ್ ಇಡುವಂತೆ ಸೂಚಿಸಿದರು.

























