ಹಾಸನ : ಬೆಳಗಿನ ಜಾವ ಮುಸುಕಿನಲ್ಲಿ ಪಂಕ್ಚರ್ ಆಗಿ ರಸ್ತೆಯಲ್ಲಿ ನಿಂತಿದ್ದ ಟಿಂಬರ್ ಲಾರಿಗೆ ಕಾರೊಂದು ಭೀಕರವಾಗಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.
ಕಾರಿನಲ್ಲಿದ್ದ ಪ್ರದೀಪ್ (30), ಗುರು (25) ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.
ಈ ನಾಲ್ವರು ಬೆಳಗಿನ ಜಾವಾ ಮುಸುಕಿನಲ್ಲಿ ಹೋಟೆಲ್ವೊಂದರ ಪೂಜೆಗೆಂದು ಕಾರಿನಲ್ಲಿ ತೆರಳುತ್ತಿದ್ದರು. ಈಶ್ವರಹಳ್ಳಿ ಕೂಡಿಗೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟಿಂಬರ್ ಲಾರಿ ಪಂಕ್ಚರ್ ಆಗಿ ನಿಂತಿದ್ದನ್ನು ಮುಸುಕಿನಲ್ಲಿ ಗಮನಿಸಿಲ್ಲ.
ಹೀಗಾಗಿ ಬಂದ ವೇಗದಲ್ಲೇ ಕಾರು ನಿಂತಿದ್ದ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ರಸ್ತೆಯಲ್ಲೇ ಉರುಳಿ ಬಿದ್ದಿದ್ದು, ಕಾರಿನ ಟಾಪ್ ಎಲ್ಲ ಕಿತ್ತು ಹೋಗಿದೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


























