ಮುಕ್ಕೂರು : ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ದಕ್ಷಿಣ ಮೂರ್ತಿ(ಶಿವ) ಸಾನಿಧ್ಯಕ್ಕೆ ಪ್ರಧಾನ ಸ್ಥಾನ ಇರುವುದು ಗೋಚರಿಸಿದ್ದು, ಈಗ ಪ್ರಧಾನವಾಗಿ ಪೂಜಿಸಲ್ಪಡುವ ವಿಷ್ಣುಮೂರ್ತಿ ದೇವರಿಗೆ ಸರಿ ಸಮಾನ ರೀತಿಯಲ್ಲಿ ದಕ್ಷಿಣ ಮೂರ್ತಿಗೂ ಸ್ಥಾನ ಕಲ್ಪಿಸಬೇಕು ಎನ್ನುವ ಅಂಶವು ಮೇಲಿನ ಮುಕ್ಕೂರಿನಲ್ಲಿ ನಡೆಯುತ್ತಿರುವ ಮೂರನೇ ದಿನದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.

ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ-ದೈವ ಶಕ್ತಿ ಸಾನಿಧ್ಯದ ನೆಲೆ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದಲ್ಲಿ ಸ್ಥಳ ಸಾನಿಧ್ಯಗಳ ಜೀರ್ಣೋದ್ಧಾರ ಕುರಿತಂತೆ ದೈವಜ್ಞ ಗಣೇಶ್ ಭಟ್ ಮುಳಿಯ ನೇತೃತ್ವದಲ್ಲಿ ನಡೆದ ಮೂರನೇ ದಿನದ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಯಿತು.
ಪೆರುವೋಡಿ ಶ್ರೀ ಕ್ಷೇತ್ರದ ಜಾತ್ರೆಯ ಸಂದರ್ಭದಲ್ಲಿ ಮೇಲಿನ ಮುಕ್ಕೂರಿನಿಂದ ಅರಸು ದೈವಗಳಾದ ಶ್ರೀ ರಕ್ತೇಶ್ವರಿ, ಶ್ರೀ ಉಳ್ಳಾಕುಲು ದೈವಗಳ ಭಂಡಾರ ತೆಗೆದುಕೊಂಡು ಹೋಗಿ ನೇಮ ನಡೆಯಬೇಕು ಎನ್ನುವ ಅಂಶ ಎರಡನೆ ದಿನದ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದ್ದು ಆ ಬಗ್ಗೆ ಮೂರನೇ ದಿನದ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ವಿಮರ್ಶಿಸುವ ಸಂದರ್ಭದಲ್ಲಿ ಈ ಅಂಶ ಗೋಚರಕ್ಕೆ ಬಂದಿದೆ.

ಪ್ರಧಾನ ಸ್ಥಾನ
ಪೆರುವೋಡಿ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಅನಾದಿ ಕಾಲದಲ್ಲಿ ದಕ್ಷಿಣ ಮೂರ್ತಿ(ಶಿವ) ಪ್ರಧಾನ ಸ್ಥಾನದಲ್ಲಿ ಇತ್ತು ಅನ್ನುವ ಅಂಶ ಪ್ರಶ್ನಾಚಿಂತನೆಯಲ್ಲಿ ಕಂಡು ಬರುತ್ತಿದೆ. ಈಗ ವಿಷ್ಣುಮೂರ್ತಿ ದೇವರು ಪ್ರಧಾನ ಸ್ಥಾನದಲ್ಲಿದ್ದು ದಕ್ಷಿಣ ಮೂರ್ತಿಯನ್ನು ಸುತ್ತುಪೌಳಿಯ ದಿಕ್ಕಿನಲ್ಲಿ ಪೂಜಿಸಲಾಗುತ್ತಿದೆ. ದಕ್ಷಿಣ ಮೂರ್ತಿಗೆ ಸಿಗಬೇಕಿದ್ದ ಪ್ರಾಧ್ಯಾನತೆ ಸಿಗುತ್ತಿಲ್ಲ. ಪ್ರಸ್ತುತ ವಿಷ್ಣುಮೂರ್ತಿ ದೇವರು ಪ್ರಧಾನ ಸ್ಥಾನದಲ್ಲಿ ಆರಾಧನೆಗೊಳ್ಳುತಿದ್ದು ಅದಕ್ಕೆ ಸರಿ ಸಮಾನವಾದ ರೀತಿಯಲ್ಲಿ ಅದರ ಪಕ್ಕದಲ್ಲೇ ಗರ್ಭಗುಡಿಯನ್ನು ನಿರ್ಮಿಸಿ ದಕ್ಷಿಣ ಮೂರ್ತಿಯನ್ನು ಪ್ರತಿಷ್ಠಾಪಿಸಿ ಎರಡಕ್ಕೂ ಸಮಾನ ಸ್ಥಾನ ಕಲ್ಪಿಸುವುದು ಸೂಕ್ತ ಎನ್ನುವ ಅಂಶ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದೆ.

ಪ್ರಶ್ನಾಚಿಂತನೆ ಬಗ್ಗೆ ಮುಂದೆ ತೀರ್ಮಾನ
ಪೆರುವೋಡಿ ಕ್ಷೇತ್ರದಲ್ಲಿ ಪ್ರಶ್ನಾ ಚಿಂತನೆ ನಡೆಸಿ ಹೆಚ್ಚಿನ ವಿಮರ್ಶೆ ನಡೆಸುವ ಬಗ್ಗೆ ಊರ ಪ್ರಮುಖರು, ಭಕ್ತರ ಅಭಿಪ್ರಾಯ ವ್ಯಕ್ತಪಡಿಸಿದರು. ಮಹಾವಿಷ್ಣುವಿನ ಇಚ್ಛೆಯಂತೆ ಮೇಲಿನ ಮುಕ್ಕೂರಿನಲ್ಲಿ ಪ್ರಶ್ನಾಚಿಂತನೆ ನಡೆಯುತ್ತಿದೆ. ಮೇಲಿನ ಮುಕ್ಕೂರು ಕ್ಷೇತ್ರ ಜೀರ್ಣೋದ್ಧಾರಗೊಂಡು ಉತ್ಸವಗಳು ಆರಂಭಗೊಂಡ ಬಳಿಕ ಈ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವ ಸರ್ವ ಸಾನಿಧ್ಯಗಳ ಪುನರುತ್ಥಾನದ ಕಾರ್ಯಗಳು ತಾನಾಗಿಯೇ ಆಗುತ್ತದೆ. ಇನ್ನೂ ಪೆರುವೋಡಿ ಕ್ಷೇತ್ರದಲ್ಲಿ ಪ್ರಶ್ನಾಚಿಂತನೆ ನಡೆಸುವುದು ಕ್ಷೇತ್ರದ ಆಡಳಿತ ಸಮಿತಿ, ಭಕ್ತ ವೃಂದಕ್ಕೆ ಬಿಟ್ಟ ವಿಚಾರ ಎಂದು ದೈವಜ್ಞರು ಅಭಿಪ್ರಾಯಿಸಿದರು. ಮೇಲಿನ ಮುಕ್ಕೂರಿನ ಜೀರ್ಣೋದ್ಧಾರ ಕಾರ್ಯಕ್ಕೆ ಪ್ರಥಮ ಆದ್ಯತೆ ನೀಡೋಣ. ಪ್ರಶ್ನಾ ಚಿಂತನೆ ನಡೆಸುವ ಬಗ್ಗೆ ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ಹಾಗೂ ಭಕ್ತವೃಂದ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದು ದೇವಾಲಯದ ಆಡಳಿತ ಸಮಿತಿ ಸದಸ್ಯರು ಅಭಿಪ್ರಾಯಿಸಿದರು.
ಐದು ಕಡೆಗಳಲ್ಲಿ ಉತ್ಸವ
ಮೇಲಿನ ಮುಕ್ಕೂರಿನ ಸಾನಿಧ್ಯಕ್ಕೆ ಸಂಬಂಧಿಸಿ ಐದು ಕಡೆಗಳಲ್ಲಿ ಬೇರೆ-ಬೇರೆ ಉತ್ಸವಗಳು ನಡೆಯುತಿತ್ತು. ಅಪಾರ ಭೂ ಸಂಪತ್ತು ಹೊಂದಿದ್ದ ಕ್ಷೇತ್ರ ಇದಾಗಿದ್ದು ಬೇರೆ-ಬೇರೆ ಕುಟುಂಬಗಳ ಒಡೆತನದಲ್ಲಿರುವ ಸ್ಥಳಗಳಲ್ಲಿಯು ಬೇರೇ ಬೇರೇ ಸಾನಿಧ್ಯಗಳಿದ್ದು ಮೇಲಿನ ಮುಕ್ಕೂರಿನಲ್ಲಿ ಸ್ಥಳ ಸಾನಿಧ್ಯ ಜೀರ್ಣೋದ್ಧಾರಗೊಂಡು ಆರಾಧನೆ ಆರಂಭಗೊಂಡ ಬಳಿಕ ಈ ಎಲ್ಲ ಸಾನಿಧ್ಯಗಳು ಬೆಳಗಲಿದೆ ಎಂಬ ಅಂಶ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದೆ.
ಹಸುರು ಹೊರೆಕಾಣಿಕೆ ಸಮರ್ಪಿಸಿ
ಮೇಲಿನ ಮುಕ್ಕೂರು ತರವಾಡು ಕ್ಷೇತ್ರವು ಅಪಾರ ಭೂ ಸಂಪತ್ತು ಹೊಂದಿತ್ತು. ಭೂ ಮಸೂದೆ ಕಾಲದಲ್ಲಿ ಹಲವರು ಅರ್ಜಿ ಸಲ್ಲಿಸಿದ ಪರಿಣಾಮ ಸಾಕಷ್ಟು ಜಾಗ ಬೇರೆ ಬೇರೆ ವ್ಯಕ್ತಿಗಳ ಪಾಲಾಗಿದೆ. ಹಾಗಾಗಿ ಕ್ಷೇತ್ರದ ವ್ಯಾಪ್ತಿಯ ಜಮೀನಿನ ಒಡೆತನ ಹೊಂದಿರುವ ಕುಟುಂಬಗಳು ಮೇಲಿನ ಮುಕ್ಕೂರಿನ ದೈವ-ದೇವಿ ಶಕ್ತಿಗಳನ್ನು ಆರಾಧಿಸಬೇಕು. ನವರಾತ್ರಿ ಸೇರಿದಂತೆ ವಿವಿಧ ಪರ್ವ ದಿನಗಳಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸ್ಥಳಗಳಲ್ಲಿ ವಾಸವಾಗಿರುವ ಮನೆಗಳಿಂದ ಕ್ಷೇತ್ರಕ್ಕೆ ಈಗ ಸಲ್ಲಿಕೆಯಾಗುತ್ತಿರುವ ಹಸುರು ಹೊರೆಕಾಣಿಕೆ ಏನೇನೂ ಸಾಲದು. ಅದರ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗಬೇಕು ಎಂಬ ಅಂಶ ಪ್ರಶ್ನಾಚಿಂತನೆಯಲ್ಲಿ ಕಂಡು ಬಂತು.
ಈ ಸಂದರ್ಭದಲ್ಲಿ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದ ಪ್ರಮುಖರಾದ ಎಂ.ಕೆ.ಬಾಲಚಂದ್ರ ರಾವ್ ಕೊಂಡೆಪ್ಪಾಡಿ, ಉಮೇಶ್ ರಾವ್ ಕೊಂಡೆಪ್ಪಾಡಿ, ಶ್ರೀಧರ ಬೈಪಡಿತ್ತಾಯ, ಮೋಹನ ಬೈಪಡಿತ್ತಾಯ, ವಸಂತ ಬೈಪಡಿತ್ತಾಯ, ಲಕ್ಷ್ಮೀಶ ಬೈಪಡಿತ್ತಾಯ, ಸುಧೀರ್ ಕೊಂಡೆಪ್ಪಾಡಿ, ಸುಬ್ರಾಯ ಭಟ್ ನೀರ್ಕಜೆ, ನರಸಿಂಹ ತೇಜಸ್ವಿ, ಗೋಪಾಲಕೃಷ್ಣ ಭಟ್ ಮನವಳಿಕೆ ಸಹಿತ ಊರ ಪ್ರಮುಖರು ಉಪಸ್ಥಿತರಿದ್ದರು.