ನವದೆಹಲಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ದಿನಗಣನೆ ಶುರುವಾಗಿದೆ. ಮುಂದಿನ ಒಂದು ವಾರದಲ್ಲಿ ಮುಹೂರ್ತ ಪ್ರಕಟ ಆಗುವ ಸಂಭವ ಇದೆ. ಹೀಗಾಗಿ ಟಿಕೆಟ್ ರಾಜಕೀಯ ಚುರುಕು ಪಡೆದಿದೆ.
ಕರ್ನಾಟಕ ಬಿಜೆಪಿ ಹುರಿಯಾಳುಗಳನ್ನು ಅಂತಿಮಗೊಳಿಸುವ ಸಲುವಾಗಿ ದೆಹಲಿಯಲ್ಲಿ ಬಿಜೆಪಿ ಸಿಇಸಿ ಸಂಜೆಯಿಂದ ಸಭೆ ನಡೆಸಿದೆ.
ಜೆ.ಪಿ ನಡ್ಡಾ ನೇತೃತ್ವದ ಸಭೆಯಲ್ಲಿ ಯಡಿಯೂರಪ್ಪ, ವಿಜಯೇಂದ್ರ, ಅಶೋಕ್, ಶೆಟ್ಟರ್, ಬಿಎಲ್ ಸಂತೋಷ್ ಸೇರಿ ಪ್ರಮುಖರು ಭಾಗವಹಿಸಿದ್ದಾರೆ. ಯಾರಿಗೆ ಟಿಕೆಟ್ ಕೊಡ್ಬೇಕು, ಯಾರನ್ನು ಬಿಡ್ಬೇಕು, ಸಾಧಕ-ಬಾಧಕಗಳೇನು ಎಂಬ ಬಗ್ಗೆ ಚರ್ಚೆ ನಡೆದಿದೆ.
ಒಂದೆರಡು ದಿನಗಳಲ್ಲಿ ಬಿಜೆಪಿಯ ಎರಡನೇ ಪಟ್ಟಿ ರಿಲೀಸ್ ಆಗಲಿದೆ. ಈ ಪಟ್ಟಿಯಲ್ಲಿ ಗೊಂದಲ ಇಲ್ಲದ ರಾಜ್ಯದ 10 ರಿಂದ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳು ಪ್ರಕಟವಾಗುವ ನಿರೀಕ್ಷೆ ಇದೆ. 50% ರಷ್ಟು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿ ಹೊಸಬರಿಗೆ ಮಣೆ ಹಾಕಬಹುದು. ಜೆಡಿಎಸ್ ಜೊತೆ ಸೀಟು ಹಂಚಿಕೆ ಫೈನಲ್ ಆಗದ ಕಾರಣ ಮಂಡ್ಯ, ಹಾಸನ, ಕೋಲಾರ ಸೇರಿ ಹಲವು ಕ್ಷೇತ್ರಗಳಿಗೆ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಿಸಲ್ಲ ಎನ್ನಲಾಗಿದೆ.


























