ಸವಣೂರು : ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡುವ ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ದ.ಕ.ಜಿಲ್ಲೆಯ ಕಡಬ ತಾಲ್ಲೂಕಿನ ಸವಣೂರು ಗ್ರಾಮದ ಮಾಲೆತ್ತಾರಿನ ಶಾರದಾ ಎಂ. ಭಾಜನರಾಗಿದ್ದಾರೆ.

ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಸಲ್ಲಿಸಿರುವ ಅಮೋಘ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡುತ್ತಿದೆ.
ಮಾರ್ಚ್ 12 ರಂದು ಬೆಂಗಳೂರಿನ ಕಬ್ಬನ್ ಉದ್ಯಾನವನದ ಜವಾಹರ್ ಬಾಲ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
25,000 ರೂ. ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸರ್ಕಾರ ಪ್ರತಿ ವರ್ಷ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಾಧಕ ಮಹಿಳೆಯರಿಗೆ ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸುತ್ತದೆ. 26 ಪ್ರಶಸ್ತಿಗಳನ್ನು 7 ವಿಭಾಗದಲ್ಲಿ ನೀಡಲಾಗುತ್ತದೆ. ಮಹಿಳಾ ಅಭಿವೃದ್ಧಿಗಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಗೆ 6, ಮಹಿಳಾ ಅಭಿವೃದ್ಧಿಗೆ ಶ್ರಮಿಸುತ್ತಿರುವ ವ್ಯಕ್ತಿಗಳಿಗೆ 8, ಕಲೆಯಲ್ಲಿ ಸಾಧನೆ 5, ಸಾಹಿತ್ಯದಲ್ಲಿ ಸಾಧನೆ 3, ಕ್ರೀಡೆಯಲ್ಲಿ ಸಾಧನೆ 2 ಹಾಗೂ ಶಿಕ್ಷಣ, ವೀರ ಮಹಿಳೆ ವಿಭಾಗದಲ್ಲಿ ತಲಾ 1 ಪ್ರಶಸ್ತಿ ನೀಡಲಾಗಿದೆ.
ಸವಣೂರು ಗ್ರಾ.ಪಂ.ನ ಗ್ರಂಥಪಾಲಕರಾಗಿರುವ ಶಾರದಾ ಅವರು ಕಲಾ ವಿಭಾಗದಲ್ಲಿ ಮಾಡಿರುವ ಸೇವೆಗೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
ಶಾರದಾ ಮಾಲೆತ್ತಾರು ಅವರು ಸವಣೂರಿನ ಪದ್ಮಶ್ರೀ ಯುವತಿ ಮಂಡಲದ ಅಧ್ಯಕ್ಷರಾಗಿ ತಮ್ಮ ತಂಡವನ್ನು ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ಯುವಜನ ಮೇಳದಲ್ಲಿ ತೊಡಗಿಸುವ ಕಾರ್ಯ ಮಾಡಿದ್ದಾರೆ. ಅಲ್ಲದೆ ವಿವಿಧ ವೇದಿಕೆಗಳಲ್ಲಿ ಮಹಿಳೆಯರನ್ನು ಸೇರಿಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೆ ದ.ಕ.ಜಿಲ್ಲಾ ಗ್ರಂಥಾಲಯ ನೌಕರರ ಸಂಘದ ಅಧ್ಯಕ್ಷರಾಗಿದ್ದಾರೆ.
ಶಾರದಾ ಅವರು ಸವಣೂರು ಗ್ರಾಮದ ಮಾಲೆತ್ತಾರು ದಿ.ಚೆನ್ನಪ್ಪ ಗೌಡ ಮತ್ತು ಪದ್ಮಾವತಿ ದಂಪತಿಗಳ ಪುತ್ರಿ.

























