ಚಿಕ್ಕಮಗಳೂರು : ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತ ಹಾಗೂ ಚುರುಮುರಿ ವ್ಯಾಪಾರಿಯೋರ್ವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಗೆ 25,000 ರೂ. ಹಣ ನೀಡಿ ಗೆಲ್ಲುವಂತೆ ಶುಭ ಹಾರೈಸಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿ ಇಂದು ಬೆಳಗ್ಗೆಯಿಂದ ಚಿಕ್ಕಮಗಳೂರು ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಈ ವೇಳೆ ಪ್ರಚಾರಕ್ಕೆಂದು ಹೋದಾಗ ಚಿಕ್ಕಮಗಳೂರು ಹೊರವಲಯದ ತೇಗೂರು ಸರ್ಕಲ್ ನಲ್ಲಿನ ಚುರುಮುರಿ ವ್ಯಾಪಾರಿ ಲೋಕೇಶ್ ಬಾಬು ಅವರು ಕೋಟಾಗೆ 25 ಸಾವಿರ ಹಣವನ್ನ ಚುನಾವಣಾ ಖರ್ಚಿಗಾಗಿ ನೀಡಿ ಗೆಲ್ಲುವಂತೆ ಶುಭ ಹಾರೈಸಿದ್ದಾರೆ.
ಹಣದ ಜೊತೆ ಎಲೆ-ಅಡಿಕೆ-ಬಾಳೆಹಣ್ಣು ಸೇರಿ ವಿವಿಧ ಹಣ್ಣುಗಳನ್ನ ನೀಡಿ ಚುನಾವಣೆಗೆ ಶುಭಕೋರಿದ್ದಾರೆ.
ಕಳೆದ 25 ವರ್ಷಗಳಿಂದ ತೇಗೂರು ಸರ್ಕಲ್ ನಲ್ಲಿ ಚುರುಮುರಿ ಅಂಗಡಿ ಇಟ್ಟಿರುವ ಲೋಕೇಶ್ ಬಿಜೆಪಿಯ ಅಪ್ಪಟ ಕಾರ್ಯಕರ್ತ. ಇಂದು ಕೋಟಾ ಪ್ರತಿಯೊಂದು ಅಂಗಡಿಗಳಿಗೆ ಹೋಗಿ ಮತಯಾಚನೆ ಮಾಡುವ ವೇಳೆ ಹಣ ನೀಡಿ ಶುಭಕೋರಿದ್ದಾರೆ. ಈ ವೇಳೆ ಕೋಟಾ ಜೊತೆಗಿದ್ದ ಸಿ.ಟಿ ರವಿ ಲೋಕೇಶ್ ರನ್ನ ಆತ್ಮೀಯವಾಗಿ ತಬ್ಬಿಕೊಂಡು ಇಂತಹ ದೇವ ದುರ್ಲಬ ಕಾರ್ಯಕರ್ತರೇ ಬಿಜೆಪಿಯ ಶಕ್ತಿ ಎಂದು ವರ್ಣಿಸಿದ್ದಾರೆ.
ಇಂದು ಮತ್ತು ನಾಳೆ ಚಿಕ್ಕಮಗಳೂರಿನಲ್ಲಿ ಪ್ರಚಾರ ಮಾಡಲಿರುವ ಕೋಟಾ ಶ್ರೀನಿವಾಸ ಪೂಜಾರಿ ಜಿಲ್ಲೆಯ ವಿವಿಧೆಡೆ ಪ್ರಚಾರ ಮಾಡಲಿದ್ದಾರೆ. ಇಂದು ಬೆಳಗ್ಗೆ ಯೋಗಶಾಲೆ, ಜಿಲ್ಲಾ ಆಟದ ಮೈದಾನದಲ್ಲಿ ವಾಕ್ ಮಾಡುತ್ತಿದ್ದವರನ್ನ ಭೇಟಿ ಮಾಡಿ ಮತಬೇಟೆ ನಡೆಸಿದ್ದಾರೆ. ಸರಳ ಹಾಗೂ ಸಜ್ಜನ ವ್ಯಕ್ತಿತ್ವದ ಕೋಟಾಗೆ ಮತದಾರರು ಬೆಂಬಲ ನೀಡುವಂತೆ ಭರವಸೆ ನೀಡಿದ್ದಾರೆ.


























