ನವದೆಹಲಿ : ಅರಬ್ಬೀ ಸಮುದ್ರದಲ್ಲಿ ಕಡಲ್ಗಳ್ಳರ ದಾಳಿಗೆ ಭಾರತೀಯ ನೌಕಾಪಡೆ ತಕ್ಕ ಪ್ರತ್ಯುತ್ತರ ನೀಡಿದೆ. ಅಲ್ಲದೇ ಇರಾನ್ ಮೀನುಗಾರಿಕಾ ಹಡಗು ಮತ್ತು 23 ಪಾಕಿಸ್ತಾನಿ ಪ್ರಜೆಗಳನ್ನು ರಕ್ಷಿಸಿದೆ.
ಸುಮಾರು 12 ಗಂಟೆಗಳ ಕಾಲ ನಡೆದ ಕಡಲ್ಗಳ್ಳರ ವಿರೋಧಿ ಕಾರ್ಯಾಚರಣೆಯಲ್ಲಿ ಇರಾನ್ ಮೀನುಗಾರಿಕಾ ಹಡಗು ಮತ್ತು 23 ಪಾಕಿಸ್ತಾನಿ ಪ್ರಜೆಗಳನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ.
ಮಾರ್ಚ್ 28 ರಂದು ತಡರಾತ್ರಿ ಇರಾನಿನ ಮೀನುಗಾರಿಕಾ ನೌಕೆ ‘ಅಲ್-ಕಂಬಾರ್ 786’ನಲ್ಲಿ ಸಂಭಾವ್ಯ ಕಡಲ್ಗಳ್ಳತನದ ಬಗ್ಗೆ ನೌಕಾಪಡೆಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಎರಡು ಭಾರತೀಯ ನೌಕಾಪಡೆಯ ಹಡಗುಗಳನ್ನು ಕಡಲ ಭದ್ರತಾ ಕಾರ್ಯಾಚರಣೆಗಳಿಗಾಗಿ ಅರೇಬಿಯನ್ ಸಮುದ್ರದಲ್ಲಿ ನಿಯೋಜಿಸಲಾಗಿತ್ತು. ಅಪಹರಣಕ್ಕೊಳಗಾದ ಮೀನುಗಾರಿಕಾ ಹಡಗನ್ನು ರಕ್ಷಿಸಲಾಯಿತು ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ನೌಕಾಪಡೆಯ ತಂಡಗಳು ಹಡಗನ್ನು ಸಂಪೂರ್ಣವಾಗಿ ಶುಚಿಗೊಳಿಸಿದವು. ಹಡಗನ್ನು ಸುರಕ್ಷಿತವಾಗಿ ಸಾಗಿಸಲು ಸೂಕ್ತ ಕ್ರಮಕೈಗೊಂಡಿವೆ. ಇದರಿಂದಾಗಿ ಸಾಮಾನ್ಯ ಮೀನುಗಾರಿಕೆ ಚಟುವಟಿಕೆಗಳು ಪುನರಾರಂಭಗೊಳ್ಳಬಹುದು ಎಂದು ನೌಕಾಪಡೆ ಹೇಳಿದೆ.
ಈ ತಿಂಗಳ ಆರಂಭದಲ್ಲಿ ಭಾರತೀಯ ನೌಕಾಪಡೆಯು ಮತ್ತೊಂದು ಧೈರ್ಯಶಾಲಿ ಕಾರ್ಯಾಚರಣೆ ನಡೆಸಿತ್ತು. ಕಡಲ್ಗಳ್ಳರ ದಾಳಿಯಿಂದ ಭಾರತೀಯ ಕರಾವಳಿ ತೀರದಿಂದ ಸುಮಾರು 2,600 ಕಿ.ಮೀ ದೂರದಲ್ಲಿ ಸಾಗುತ್ತಿದ್ದ ರುಯೆನ್ ಎಂಬ ಹಡಗನ್ನು ರಕ್ಷಿಸಿದ್ದರು.