ಬೆಂಗಳೂರು : ನಗರತ್ಪೇಟೆಯಲ್ಲಿ ಮಾ.17ರಂದು ಮೊಬೈಲ್ ಶಾಪ್ ಮಾಲೀಕನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಮುಖೇಶ್ ವಿರುದ್ಧವೂ ಎಫ್.ಐ.ಆರ್ ದಾಖಲು ಮಾಡಲಾಗಿದೆ.
ಕೋರ್ಟ್ ಅನುಮತಿ ಪಡೆದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಘಟನೆ ಬಳಿಕ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಬಂಧಿತರಲ್ಲಿ ಒಬ್ಬನಾದ ಸುಲೇಮಾನ್ ಎಂಬಾತನ ತಾಯಿ ಅವರು ಮುಖೇಶ್ ವಿರುದ್ಧ ಪ್ರತಿ ದೂರು ನೀಡಿದ್ದರು. ನಂತರ ದೂರು ಆಧರಿಸಿ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದರು. ಇದೀಗ ಕೋರ್ಟ್ ಅನುಮತಿ ಪಡೆದು ಮುಖೇಶ್ ವಿರುದ್ಧ ಎಫ್.ಐ.ಆರ್ ದಾಖಲು ಮಾಡಲಾಗಿದೆ.
ದೂರಿನಲ್ಲೇನಿದೆ..!?
ಮುಖೇಶ್ ಮೂರರಿಂದ ನಾಲ್ಕು ದಿನಗಳಿಂದ ಜೊರಾಗಿ ಸೌಂಡ್ ಸಿಸ್ಟಂ ಹಾಕಿದ್ದ. ಸೌಂಡ್ ಸಿಸ್ಟಂನಿಂದ ರಂಜಾನ್ ಹಿನ್ನಲೆ ಪ್ರಾರ್ಥನೆ ಮಾಡುವ 3 ಸಾವಿರ ಮಂದಿಗೆ ತೊಂದರೆಯಾಗಿದೆ. ಹೀಗಾಗಿ ಏಕೆ ಸೌಂಡ್ ಸಿಸ್ಟಂ ಜೋರಾಗಿ ಕೊಟ್ಟಿದ್ದೀಯ ಎಂದು ನನ್ನ ಮಗ ಹಾಗೂ ಆತನ ಸ್ನೇಹಿತರು ಹೇಳಿದಕ್ಕೆ ಮುಖೇಶ್ನಿಂದ ಐವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಘಟನೆಯ ಮರುದಿನವೇ ಬಂಧಿತ ಸುಲೇಮಾನ್ ತಾಯಿ ದೂರು ನೀಡಿದ್ದರು.
ಘಟನೆ ವಿವರ
ಕಳೆದ ಮಾ.17 ರಂದು ನಗರತ್ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಇದು ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೇ ಅಲ್ಲ, ಇದನ್ನು ಖಂಡಿಸಿ ಘಟನಾ ಸ್ಥಳದಲ್ಲಿ ಹನುಮ ಭಕ್ತರು ರ್ಯಾಲಿ ನಡೆಸಿದ್ದರು.
ಈ ರ್ಯಾಲಿಯಲ್ಲಿ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ ರಾಮಮೂರ್ತಿ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ , ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಸೇರಿದಂತೆ ಶಾಸಕರು ಹಾಗೂ ಹಲವು ನಾಯಕರು ಮತ್ತು ಹನುಮ ಭಕ್ತರು ಪಾಲ್ಗೊಂಡಿದ್ದರು.


























