ಪುತ್ತೂರು : ಕೃಷಿ ಜಮೀನ ಬಳಿ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯುವುದರಿಂದ ತಮಗೆ ತೊಂದರೆಯಾಗಬಹುದೆಂಬ ಆತಂಕದಿಂದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಆರ್ಯಾಪು ಗ್ರಾಮದ ಕಂಬಳತ್ತಡ್ಡ ಎಂಬಲ್ಲಿ ನಡೆದಿದೆ.

ಕುಡಿಯುವ ನೀರಿನ ಸಮಸ್ಯೆಯಿರುವ ಆರ್ಯಾಪು ಗ್ರಾ.ಪಂ ವ್ಯಾಪ್ತಿಯ ಕೊಲ್ಯ ಎಂಬಲ್ಲಿ 80 ಮನೆಗಳಿರುವ ಕಾಲೋನಿಗಳಿಗೆ ಕುಡಿಯುವ ನೀರು ಸರಬರಾಜಿಗಾಗಿ ಕಂಬಳತ್ತಡ್ಡ ಎಂಬಲ್ಲಿ ರಸ್ತೆ ಬದಿ ಕೊಳವೆ ಬಾವಿ ಕೊರೆಯಲು ಪಾಯಿಂಟ್ ಮಾಡಲಾಗಿತ್ತು. ಮೇ.6 ರಂದು ಬಾವಿ ಕೊರೆಯಲು ಲಾರಿಯೂ ಬಂದಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಕೃಷಿ ಜಮೀನಿನ ಬಳಿಯಲ್ಲಿ ಕೊಳವೆ ಬಾವಿ ಕೊರೆಯುವುದರಿಂದ ನಮ್ಮಲ್ಲಿರುವ ಅಲ್ಪ ಸ್ವಲ್ಪ ಕೃಷಿಗೆ ತೊಂದರೆಯಾಗುತ್ತಿದೆ ಎಂದು ಆತಂಕದಿಂದ ಕೊಳವೆ ಬಾವಿ ಕೊರೆಯಲು ಆಕ್ಷೇಪ ವ್ಯಕ್ತಪಡಿಸಿ ಬೇರೆ ಕಡೆ ಸರಕಾರಿ ಜಮೀನಿನಲ್ಲಿ ತೆಗೆಯುವಂತೆ ವಿನಂತಿಸಿದರು.

ತಹಶೀಲ್ದಾರ್, ಇಓ, ಇನ್ಸ್ಪೆಕ್ಟರ್ ಭೇಟಿ :
ಘಟನೆಯ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಕುಂಞಿ ಅಹಮ್ಮದ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಹನುಮ ರೆಡ್ಡಿ, ಸಂಪ್ಯ ಠಾಣಾ ಇನ್ಸ್ಪೆಕ್ಟರ್ ರಂಗಸಾಮಯ್ಯ, ಎಸ್ಐ ಜಂಬೂರಾಜ್ ಮಹಾಜನ್, ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರನ್ನು ಮನವೊಳಿಸಲು ಪ್ರಯತ್ನಿಸಿದರು.
ನಮಗೆ ಅಲ್ಪ, ಸ್ವಲ್ಪ ಕೃಷಿಯಿದೆ. ನಾವು ಇದನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ನಮ್ಮ ಕೃಷಿಗೆ ಅಲ್ಪ ನೀರಿರುವುದು. ಇದರ ಬಳಿಯಲ್ಲಿಯೇ ಇನ್ನೊಂದು ಬಾವಿ ಕೊರೆದರೆ ನಮಗೆ ತೊಂದರೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಜನರಿಗೆ ಕುಡಿಯುವ ನೀರು ಆದ್ಯತೆ ನೀಡಬೇಕು. ನಂತರ ಕೃಷಿ. ಹೀಗಾಗಿ ನೀವು ಅಡ್ಡಿ ಪಡಿಸಬಾರದು. ಸಾರ್ವಜನಿಕ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯಲು ಯಾರ ಅನುಮತಿ ಬೇಕಾಗಿಲ್ಲ. ಕುಡಿಯುವ ನೀರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಕುಡಿಯಲು ನೀರಿಗೆ ಜನರಿಗೆ ಅನುಕೂಲ ಮಾಡಿಕೊಡುವಂತೆ ಎಂದು ಇನ್ಸ್ಪೆಕ್ಟರ್ ರಂಗಸಾಮಯ್ಯ ಹಾಗೂ ತಹಶೀಲ್ದಾರ್ ಕುಂಞಿ ಅಹಮ್ಮದ್ ಸ್ಥಳೀಯರಲ್ಲಿ ತಿಳಿಸಿದರು.
ಕೊಳವೆ ಬಾವಿಗೆ ಪಾಯಿಂಟ್ ಮಾಡಿದಾಗಲೇ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ. ಅಲ್ಲದೆ ಇಲ್ಲಿ ಕೊರೆದರೆ ಎಲ್ಲರಿಗೂ ನೀರಿನ ಸಮಸ್ಯೆ ಉಂಟಾಗಲಿದೆ. ಬೇರೆ ಸರಕಾರಿ ಜಾಗದಲ್ಲಿ ತೆಗೆಯಬಹುದು. ಅಲ್ಲದೆ ಮೇ. ತಿಂಗಳ ತನಕ ನಮ್ಮ ಕೊಳವೆ ಬಾವಿಯಿಂದ ಕುಡಿಯಲು ನೀರು ಕೊಡುತ್ತೇವೆ. ನಮ್ಮ ಕೊಳವೆ ಬಾವಿಯಿಂದ ಪೈಪ್ ಅಳವಡಿ ಅಥವಾ ಟ್ಯಾಂಕರ್ ಮೂಲಕ ನೀರು ಕೊಡುವುದಾಗಿ ಸಾರ್ವಜನಿಕರು ಅಧಿಕಾರಿಗಳಲ್ಲಿ ತಿಳಿಸಿದರು. ಅಲ್ಲದೆ ಪಕ್ಕದ ಲ ಔಟ್ನ ಕೊಳವೆ ಬಾವಿಯಿಂದ ನೀರು ಕೊಡಲು ಸಿದ್ದರಿರುವುದಾಗಿ ತಿಳಿಸಿದರು.

24 ಗಂಟೆ ನೀಡುವುದು ಅಸಾಧ್ಯ. ತುರ್ತು ನೀಡಬಹುದು. ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡಬೇಕು. ಕುಡಿಯುವ ನೀರಿಗೆ ಬಿಟ್ಟು ಇತರ ಉದ್ದೇಶಗಳಿಗಾದರೆ ನಾವು ಅವಕಾಶ ಕೊಡುವುದಿಲ್ಲ. ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಸ್ಥಳೀಯರ ಮನವೊಳಿಸಿದರು.
ಕೊಳವೆ ಬಾವಿ ಕೊರೆಯಲು ಕೃಷಿಕರಿಗೆ ನಾವು ಅಡ್ಡಿಪಡಿಸುವುದಿಲ್ಲ. ಈಗ ಕೊಲ್ಯದಲ್ಲಿ 80 ಮನೆಗಳಿಗೆ ನೀರಿಲ್ಲ. ಅಲ್ಲಿ ಕೊಳವೆ ಬಾವಿಯೂ ಇಲ್ಲ. ನಮಗೆ ಕೃಷಿ ಭೂಮಿಯೂ ಉಳಿಯಬೇಕು. ಕುಡಿಯಲು ನೀರೂ ಬೇಕು. ಆದರೆ ಪ್ರಥಮ ಆದ್ಯತೆ ಕುಡಿಯುವ ನೀರಿಗೆ ನೀಡಬೇಕು. ನಿಮಗೆ ಕುಡಿಯುವ ನೀರಿನ ಸಮಸ್ಯೆಯಾದರೂ ನಾವೇ ನೀರುಕೊಡಬೇಕು. ಕೃಷಿಗಾಗಿ ಕೊಳವೆ ಬಾವಿ ಕೊರೆಯಲು ಈ ತನಕ ನಾವು ಅಡ್ಡಿಪಡಿಸಿಲ್ಲ. ಇನ್ನು ಮುಂದೆಯೂ ಕೃಷಿಗೆ ಕೊಳವೆ ಬಾವಿ ಕೊರೆಯಲು ನಿಮಗೂ ಅನುಮತಿ ನೀಡುತ್ತೇವೆ. ನಮ್ಮ ಪಂಪ್ ಸೀಮಿತ ಅವಧಿಯಲ್ಲಿ ಮಾತ್ರ ಚಲಾವಣೆಯಲ್ಲಿರುತ್ತದೆ ಎಂದು ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ತಿಳಿಸಿದ್ದು ಅದಕ್ಕೆ ಒಪ್ಪಿಕೊಂಡ ಸ್ಥಳೀಯರು ಕೊಳವೆ ಬಾವಿ ಕೊರೆಯಲು ಅವಕಾಶ ಮಾಡಿಕೊಟ್ಟಿದ್ದು ನಂತರ ಕೊಳವೆ ಬಾವಿ ಕೊರೆಯಲಾಯಿತು.

ಪಂಚಾಯತ್ ಸದಸ್ಯರು ನಾಪತ್ತೆ
ಕೊಳವೆ ಬಾವಿ ಕೊರೆಯಲು ಲಾರಿ ಬರುವ ತನಕ ಈ ಭಾಗದ ಪಂಚಾಯತ್ ಸದಸ್ಯರಿಬ್ಬರೂ ಇದೇ ಸ್ಥಳದಲ್ಲಿದ್ದರು. ಆದರೆ ಲಾರಿ ಬಂದು ಮೇಲೆ ಅವರಿಬ್ಬರೂ ಇಲ್ಲಿಂದ ನಾಪತ್ತೆಯಾಗಿದ್ದಾರೆ ಎಂದು ಸದಸ್ಯರು ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

144 ಸೆಕ್ಷನ್ ಹಾಕಿಸಿ
ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆ ಮಾಡಲು ಕೊಳವೆ ಬಾವಿ ಕೊರೆಯಲು ಅಡ್ಡಿ ಪಡಿಸಿ ಜನ ಸೇರಿರುವುದಕ್ಕೆ 144 ಸೆಕ್ಷನ್ ಹಾಕುವಂತೆ ತಹಶೀಲ್ದಾರ್ ಕುಂಞಿ ಅಹಮ್ಮದ್ ಇನ್ಸ್ಪೆಕ್ಟರ್ ರಂಗ ಸಾಮಯ್ಯ ರವರಿಗೆ ಸೂಚಿಸಿದರು.


























