ಬೆಂಗಳೂರು : ಹಾಸನದಲ್ಲಿ ಮಹಿಳೆಯ ಕಿಡ್ನಾಪ್ ಮಾಡಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಕಸ್ಟಡಿಯ ಅವಧಿ ಅಂತ್ಯವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ಅಧಿಕಾರಿಗಳು ಇಂದು ಮತ್ತೆ ರೇವಣ್ಣ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ರವೀಂದ್ರಕುಮಾರ್ ಬಿ. ಕಟ್ಟಿಮನಿ ಅವರ ಮುಂದೆ ಹೆಚ್.ಡಿ ರೇವಣ್ಣ ಅವರನ್ನು ಹಾಜರುಪಡಿಸಲಾಗಿದೆ. ರೇವಣ್ಣ ಪರ ವಕೀಲ ಮೂರ್ತಿ ಡಿ. ನಾಯ್ಕ್ ಅವರು ವಾದ ಮಂಡಿಸಿದ್ದಾರೆ.
ನ್ಯಾ. ರವೀಂದ್ರಕುಮಾರ್ ಬಿ ಕಟ್ಟಿಮನಿಯವರ ಪೀಠದಲ್ಲಿ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲು ಎಸ್.ಐ.ಟಿ ಮನವಿ ಮಾಡಿತು. ಆರೋಪಿಯು ತನಿಖೆಗೆ ಸಹಕರಿಸಿಲ್ಲ ಎಂದು ಉಲ್ಲೇಖ ಮಾಡಲಾಗಿದೆ.
ಎಸ್ಐಟಿ ಮನವಿಗೆ ರೇವಣ್ಣ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಇದು ಆರ್ಟಿಕಲ್ 21ರ ಉಲ್ಲಂಘನೆಯಾಗುತ್ತದೆ. ಆರೋಪಿಗೆ ತನ್ನ ವಿರುದ್ಧದ ಆರೋಪಗಳ ತಿರಸ್ಕರಿಸುವ ಹಕ್ಕಿದೆ. ತನಿಖಾಧಿಕಾರಿಯ ಉದ್ದೇಶ ಆರೋಪಿಯ ಹೇಳಿಕೆ ದಾಖಲಿಸಿಕೊಳ್ಳುವುದು. ಆದರೆ ಅವರು ಒಪ್ಪಿಕೊಂಡಿಲ್ಲ ಅಂದ್ರೆ ಹೇಗೆ ತಪ್ಪಾಗುತ್ತದೆ ಎಂದು ಮೂರ್ತಿ ಡಿ ನಾಯ್ಕ್ ವಾದ ಮಂಡಿಸಿದರು.
ಎಸ್ಐಟಿ ಯಾವ ಆರೋಪ ಮಾಡಿದಿಯೋ ಅದೆಲ್ಲಾ ಬೆಲೆಬಲ್ ಅಫೆನ್ಸ್ ಆಗಿದೆ. 364A ಹಾಕಿರುವುದು ಸಹ ಇದರಲ್ಲಿ ಅಪ್ಲೈ ಆಗಲ್ಲ. ಮೂರು ದಿನ ಸತತ ಹೇಳಿಕೆ ದಾಖಲಿಸಿದ್ದಾರೆ. ಪುನಃ ಕಸ್ಟಡಿಗೆ ಪಡೆಯುವ ಅವಶ್ಯಕತೆ ಇಲ್ಲ. ಇದಕ್ಕೂ ಹೆಚ್ಚು ಒತ್ತಡ ಹಾಕುವುದು ಟಾರ್ಚರ್ ಆಗಲಿದೆ ಎಂದು ರೇವಣ್ಣ ಪರ ವಕೀಲರು ವಾದಿಸಿದ್ದಾರೆ.
ಆರೋಪಿ ಹೊರ ಬಂದ್ರೆ ಸಾಕ್ಷಿ ನಾಶ ಸಾಧ್ಯತೆ ಇರುತ್ತೆ ಅನ್ನೋ ಅಂಶವನ್ನು ಎಸ್ಐಟಿ ಉಲ್ಲೇಖ ಮಾಡಿದೆ. ಎಸ್ಐಟಿ ಎಸ್ಪಿಪಿ ಜಗದೀಶ್ ಅವರು ರೇವಣ್ಣ ಐಓ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿಲ್ಲ. ಬರೀ ನಕರಾತ್ಮಕವಾದ ಉತ್ತರ ನೀಡ್ತಿದ್ದಾರೆ. ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಪಿಸಿ ಇದ್ದಾರೆ. ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ ಎಂದಿದ್ದಾರೆ.
ಈ ವಾದ ಆಲಿಸಿದ ನ್ಯಾಯಾಧೀಶರು ಹೆಚ್.ಡಿ ರೇವಣ್ಣ ಅವರಿಗೆ 7 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಮಹತ್ವದ ಆದೇಶ ನೀಡಿದೆ. ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ನೀಡಿದ್ದು, ಇಂದಿನಿಂದ 7 ದಿನ ಕಾಲ ಹೆಚ್.ಡಿ ರೇವಣ್ಣ ಅವರು ಜೈಲು ಪಾಲಾಗಲಿದ್ದಾರೆ.



























