ಉತ್ತರ ಪ್ರದೇಶ : ಬರೇಲಿಯಲ್ಲಿ ಸಿವಿಲ್ ನ್ಯಾಯಾಧೀಶರೊಬ್ಬರ ಮನೆಯಿಂದ ನಾಯಿ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ತಮ್ಮ ನೆರೆಮನೆಯ ಅಹ್ಮದ್ ತಮ್ಮ ಸಾಕು ನಾಯಿಯನ್ನು ಕದ್ದಿದ್ದಾನೆ ಎಂದು ನ್ಯಾಯಾಧೀಶರ ಕುಟುಂಬ ಆರೋಪಿಸಿದೆ.
ನ್ಯಾಯಾಧೀಶರ ಕುಟುಂಬದ ದೂರಿನ ಮೇರೆಗೆ ಪೊಲೀಸರು ಪ್ರಾಣಿ ಹಿಂಸೆ ಕಾಯ್ದೆಯಡಿ 12ರಕ್ಕೂ ಹೆಚ್ಚಿನ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನ್ಯಾಯಾಧೀಶರು ಪ್ರಸ್ತುತ ಹಾರ್ಡೋಯ್ನಲ್ಲಿ ನೇಮಕಗೊಂಡಿದ್ದು, ಅವರ ಕುಟುಂಬವು ಬರೇಲಿಯ ಸನ್ಸಿಟಿ ಕಾಲೋನಿಯಲ್ಲಿ ನೆಲೆಸಿದೆ.
ಎಫ್ಐಆರ್ ಪ್ರಕಾರ ಕೆಲ ದಿನಗಳ ಹಿಂದೆ ನ್ಯಾಯಾಧೀಶರ ಕುಟುಂಬ ಮತ್ತು ಅಹ್ಮದ್ ಅವರ ಕುಟುಂಬದವರ ನಡುವೆ ವಾಗ್ವಾದ ನಡೆದಿದ್ದು, ಅದೇ ಕಾಲೋನಿಯಲ್ಲಿ ವಾಸವಾಗಿರುವ ಡಂಪಿ ಅಹ್ಮದ್ ಅವರ ಪುತ್ರ ಖಾದಿರ್ ಖಾನ್ ನ್ಯಾಯಾಧೀಶರ ಕುಟುಂಬ ಸದಸ್ಯರ ಮೇಲೆ ಕೊಲೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಮೇ.16 ರಂದು ರಾತ್ರಿ ಡಂಪಿ ಅಹ್ಮದ್ ಅವರ ಪತ್ನಿ ನ್ಯಾಯಾಧೀಶರ ನಿವಾಸಕ್ಕೆ ಆಗಮಿಸಿ ಅವರ ನಾಯಿ ದಾಳಿ ಮಾಡಿದೆ ಎಂದು ಆರೋಪಿಸಿದ್ದಾರೆ. ನನ್ನ ಮಗಳು ಮತ್ತು ನನ್ನ ಮೇಲೆ ಹಲ್ಲೆ ನಡೆಸಿದೆ ಎಂದು ದೂರಿದ್ದು, ನಂತರ ವಿಷಯದ ಬಗ್ಗೆ ಸುದೀರ್ಘ ವಾಗ್ವಾದ ನಡೆದಿದೆ.
ಘಟನೆಯ ಬಗ್ಗೆ ನ್ಯಾಯಾಧೀಶರಿಗೆ ಮಾಹಿತಿ ನೀಡಲಾಗಿದ್ದು, ಅವರು ಲಕ್ನೋದಿಂದ ಬರೇಲಿ ಪೊಲೀಸರಿಗೆ ಕರೆ ಮಾಡಿ ಇಡೀ ಘಟನೆಯ ಬಗ್ಗೆ ಫೋನ್ ಮೂಲಕ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ನಂತರ ಏರಿಯಾ ಅಧಿಕಾರಿ ಅನಿತಾ ಚೌಹಾಣ್ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದು, ಬಳಿಕ ಪೊಲೀಸರು ನ್ಯಾಯಾಧೀಶರ ನಾಯಿಯನ್ನು ಹುಡುಕಲು ಮುಂದಾಗಿದ್ದಾರೆ.