ಉಪ್ಪಿನಂಗಡಿ : ಬಾರ್ ನಲ್ಲಿ ಮದ್ಯಪಾನ ಖರೀದಿ ಮಾಡಲು ತೆರಳಿದ್ದ ವ್ಯಕ್ತಿಯೋರ್ವರಿಗೆ ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲ್ಯಾಡಿ ನಿವಾಸಿ ಜೋಳಿ ಜೋಸೆಫ್ ಎಂಬವರು ನೀಡಿರುವ ದೂರಿನ ಮೇರೆಗೆ ಕುಲದೀಪ್, ಬಿಪಿನ್, ಅಜೇಯ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೋಳಿ ಜೋಸೆಫ್ ಮೇ.26 ರಂದು ಮಧ್ಯಾಹ್ನ, ಕಡಬ ತಾಲೂಕು ಕೌಕ್ರಾಡಿ ಗ್ರಾಮದ ನೆಲ್ಯಾಡಿಯ ಬಾರ್ ಗೆ ಮದ್ಯಪಾನ ಖರೀದಿ ಮಾಡಲು ತೆರಳಿದ್ದು, ಬಾರ್ ನ ಬಾಗಿಲಿನಲ್ಲಿ ಕುಲದೀಪ್, ಬಿಪಿನ್ ಹಾಗೂ ಅಜೇಯ ಎಂಬುವರು ಅಡ್ಡವಾಗಿ ನಿಂತಿರುತ್ತಾರೆ. ಜೋಸೆಫ್ ಒಳಪ್ರವೇಶಿಸುವಾಗ ಕೈ ಅವರಿಗೆ ತಾಗಿದ್ದು, ಇದರಿಂದ ಕೋಪಗೊಂಡು ಬಿಪಿನ್ ಎಂಬಾತ ಜೋಸೆಫ್ ರನ್ನು ದೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು, ಬಿಯರ್ ಬಾಟ್ಲಿಯಿಂದ ತಲೆಗೆ ಹೊಡೆದಿದ್ದು, ಕುಲದೀಪ್ ಮತ್ತು ಅಜೇಯ ರವರು ಹಲ್ಲೆಗೆ ಯತ್ನಿಸಿರುತ್ತಾರೆ.
ಹಲ್ಲೆಯಿಂದ ಜೋಸೆಫ್ ರವರಿಗೆ ಗಾಯವಾಗಿದ್ದು, ಬೊಬ್ಬೆ ಕೇಳಿ ಬಾರ್ ನಲ್ಲಿದ್ದ ಸಿಬ್ಬಂದಿಗಳು ಹಾಗೂ ಜನರು ಓಡಿ ಬರುವುದನ್ನು ಕಂಡು ಹಲ್ಲೆ ನಡೆಸಿದವರು ಜೀವಬೆದರಿಕೆ ಒಡ್ಡಿ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ, ಅ.ಕ್ರ: 64/2024 ಕಲಂ:504,307,324,506 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.