ಮಂಗಳೂರು : ಕಂಕನಾಡಿ ಬಳಿ ಒಳ ರಸ್ತೆಯೊಂದರಲ್ಲಿ ನಾಲ್ಕಾರು ಜನ ಮಸೀದಿಯ ಗೇಟ್ ಬಳಿ ರಸ್ತೆಯಲ್ಲಿ ನಮಾಜ್ ಮಾಡಿದ ಘಟನೆ ಆಕಸ್ಮಿಕವಾಗಿ ನಡೆದಿರುವಂತದ್ದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾಗುವಂತಹ ಯಾವುದೇ ವಿಚಾರವನ್ನೂ ಒಪ್ಪುವಂತದ್ದಲ್ಲ, ಈ ಪ್ರಕರಣ ಅಷ್ಟು ಗಂಭೀರವೂ ಅಲ್ಲ., ಪೊಲೀಸರು ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಮುಂದೆ ಈ ರೀತಿ ನಡೆಯದಂತೆ ಜಾಗೃತೆ ವಹಿಸಲು ಸೂಚಿಸಬಹುದಿತ್ತು. ಪೊಲೀಸರೇ ಏಕಾಏಕಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಧರ್ಮ ಯಾವುದೇ ಇರಲಿ ದೇವರೊಂದೇ. ಪೂಜೆ ಯಾವುದೇ ಇರಲಿ ಭಕ್ತಿಯೊಂದೇ. ಬೀದಿಗಳಲ್ಲಿ ಧಾರ್ಮಿಕ ಆಚರಣೆಗಳು ನಡೆಯುವುದು ಸರ್ವೇ ಸಾಮಾನ್ಯ. ಯಾವುದೇ ಧರ್ಮಗಳೂ ಇದಕ್ಕೆ ಹೊರತಾಗಿಲ್ಲ. ಪ್ರಾರ್ಥನೆ, ನಮಾಜ್ ಎನ್ನುವುದು ಆತ್ಮ ಹಾಗೂ ಪರಮಾತ್ಮನ ನಡುವೆ ನಡೆಯುವ ಒಂದು ಪವಿತ್ರ ಸಂವಹನ ಎನ್ನುವುದು ಪ್ರತೀ ಧರ್ಮದ ನಂಬಿಕೆಯಾಗಿದೆ.
ಈ ಘಟನೆಯನ್ನು ಬಿಜೆಪಿ ತನ್ನ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.
ಅಧಿಕಾರಿಗಳ ಈ ನಡೆಯ ಕುರಿತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಮಂತ್ರಿ ಹಾಗೂ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದು, ಸ್ವಯಂ ಪ್ರೇರಿತ ಪ್ರಕರಣ ಹಿಂದಕ್ಕೆ ಪಡೆಯುವಂತೆ ಇನಾಯತ್ ಆಲಿ ಆಗ್ರಹಿಸಿದ್ದಾರೆ.


























