ಯಾದಗಿರಿ : ವಿ.ಆರ್.ಎಲ್ ಬಸ್ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬಳಿ ನಡೆದಿದೆ. ಹತ್ತಿಗೂಡುರ ಗ್ರಾಮದ ಬ್ರಿಡ್ಜ್ ಬಳಿ ಬಸ್ ಪಲ್ಟಿ ಹೊಡೆದಿದೆ.
7 ಜನ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ. ಸಾವನ್ನಪ್ಪಿದ ಇಬ್ಬರು ನಿವಾಸಿಗಳು ಕಲಬುರ್ಗಿಯ ಮೂಲದವರು ಎಂದು ತಿಳಿದುಬಂದಿದೆ.
ವಿಆರ್ಎಲ್ ಬಸ್ ಕಲಬುರ್ಗಿಯಿಂದ ಬೆಂಗಳೂರು ಕಡೆ ತೆರಳುತ್ತಿತ್ತು. ಬಸ್ ನಲ್ಲಿ 37 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ ಪಲ್ಟಿ ಹೊಡೆದಿದೆ.
ಘಟನೆಯಲ್ಲಿ ಹಲವಾರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಬಳಿಕ ಅವರನ್ನು ಚಿಕಿತ್ಸೆಗಾಗಿ ಶಹಾಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುರಪುರ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ಮೃತಪಟ್ಟ ಪ್ರಯಾಣಿಕರ ಬಗ್ಗೆ ಖಚಿತ ಪಡಿಸಿದ್ದಾರೆ.


























