ಬೆಂಗಳೂರು : ನಿನ್ನೆಯಿಂದ ನರೇಂದ್ರ ಮೋದಿ 3ನೇ ಯುಗ ಆರಂಭವಾಗಿದೆ. ದೆಹಲಿಯಲ್ಲಿ ಅದ್ಧೂರಿಯಾಗಿ ಮೋದಿ ಪಟ್ಟಾಭಿಷೇಕವಾಗಿದೆ. ಕರ್ನಾಟಕದ ಐವರು ಸಂಸದರಿಗೆ ಮಂತ್ರಿಗಿರಿ ಒಲಿದಿದೆ. ಅದರಲ್ಲಿ ರಾಜ್ಯ ಖಾತೆ ಸಚಿವರಾಗಿ ಶೋಭಾ ಕರಂದ್ಲಾಜೆ ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಮೂಲಕ ಪ್ರಧಾನಿ ಮೋದಿ ಸಂಪುಟದಲ್ಲಿ ಮತ್ತೊಮ್ಮೆ ಸಚಿವ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಆದರೆ ಅವರು ಈ ಹಂತಕ್ಕೆ ಬರಲು ಸಾಕಷ್ಟು ಶ್ರಮ ವಹಿಸಿದ್ದು, ಸಾಕಷ್ಟು ರಾಜಕೀಯ ಏಳು ಬೀಳುಗಳನ್ನು ಕಂಡಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಶೋಭಾ ಕರಂದ್ಲಾಜೆ ಅವರು ಏಕೈಕ ಮಹಿಳಾ ಸಚಿವರಾಗಿದ್ದರು. 1996ರಲ್ಲಿ ಬಿಜೆಪಿಯ ಉಡುಪಿ ಮಹಿಳಾ ಮೋರ್ಚಾದಲ್ಲಿ 14 ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಬಲ ಪ್ರಚಾರಕಿಯಾಗಿ, ಹಲವರನ್ನು ಪಕ್ಷಕ್ಕೆ ಸೇರಿಸಿಕೊಂಡ ಮಹಿಳೆಯಾಗಿ, ಬಿಜೆಪಿಯ ಹಿರಿಯ ನಾಯಕ ವಿಶ್ವಾಸ ಗಳಿಸಿದ್ದರು.
ಶೋಭಾ ಕರಂದ್ಲಾಜೆ ಅವರು ಕರ್ನಾಟಕದಲ್ಲಿ ತಮ್ಮ ರಾಜಕೀಯ ವೃತ್ತಿಜೀವನದಲ್ಲಿ ಒಂದು ಹಂತಕ್ಕೆ ಬೆಳೆಯಲು ಆರಂಭಿಸಿದ್ದರು. ಒಂದಾದರೊಂದರಂತೆ ಅವರಿಗೆ ಅವಕಾಶಗಳು ಸಿಗಲಾರಂಭಿಸಿದವು. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿದ್ದಾರೆ. ರಾಜ್ಯ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವೆ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರ ಅನುಭವ ಮತ್ತು ನಾಯಕತ್ವದ ಕೌಶಲ್ಯಗಳು ಅವರ ಯಶಸ್ಸಿಗೆ ಕಾರಣವಾಗಿದೆ.
ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದ ಶೋಭಾ ಅವರು ಬಿಜೆಪಿಯ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮಹಿಳಾ ವಿಭಾಗವಾದ ರಾಷ್ಟ್ರ ಸೇವಿಕಾ ಸಮಿತಿಯಲ್ಲಿದ್ದರು. ಕರಾವಳಿ ಕರ್ನಾಟಕದಲ್ಲಿ ಬಿಜೆಪಿಯ ಮಹಿಳಾ ಮೋರ್ಚಾವನ್ನು ಕಟ್ಟಿದರು. ಅವರು 1996ರಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದರು ಮತ್ತು ಕರಾವಳಿ ಕರ್ನಾಟಕದ ಮಹಿಳೆಯರಿಗೆ ರಾಜಕೀಯ ಜೀವನವನ್ನು ಮನವರಿಕೆ ಮಾಡಲು ಶ್ರಮಿಸಿದ್ದಾರೆ.