ರಾಮನಗರ : ನೂತನ ಸಂಸದರಾದ ಡಾ.ಸಿ.ಎನ್ ಮಂಜುನಾಥ್ ಅವರು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಸಂಸದರಾಗಿ ಡಾ.ಸಿ.ಎನ್ ಮಂಜುನಾಥ್ ಅವರು ಆಯ್ಕೆ ಆಗಿದ್ದಾರೆ.

ಕನಕಪುರ- ಸಾತನೂರು ಮಾರ್ಗ ಮಧ್ಯೆ ಡಾ.ಸಿ.ಎನ್. ಮಂಜುನಾಥ್ ಅವರು ಕಾರಿನಲ್ಲಿ ತೆರಳುವಾಗ ಅದೇ ಮಾರ್ಗದಲ್ಲೇ ಅಪಘಾತ ಸಂಭವಿಸಿತ್ತು. ಆ್ಯಕ್ಸಿಡೆಂಟ್ ಅನ್ನು ನೋಡಿ ತಮ್ಮ ಕಾರನ್ನು ನಿಲ್ಲಿಸಿದ ಸಂಸದರು ಗಾಯಾಳುಗಳನ್ನು ಪರೀಕ್ಷಿಸಿದ್ದಾರೆ. ಬಳಿಕ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಸಂಸದರ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮಂಜುನಾಥ್ ಅವರು ಖ್ಯಾತ ಹೃದ್ರೋಗ ವೈದ್ಯರಾಗಿದ್ದು, ಹಲವು ವರ್ಷಗಳ ಕಾಲ ಬೆಂಗಳೂರಿನ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿದ್ದರು. ಆ ವೇಳೆ ಸಾಕಷ್ಟು ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿ ಭಾರೀ ಜನ ಮನ್ನಣೆ ಗಳಿಸಿದ್ದಾರೆ.




























