ಬೆಳಗಾವಿ : ಅತ್ಯಾಚಾರದ ದೂರುದಾರೆ ಸೇರಿ 13 ಜನರಿಗೆ ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿ ಆದೇಶಿಸಿದೆ. ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ದೂರು ಕೊಟ್ಟಿದ್ದಾಕೆಯೇ ಜೈಲು ಪಾಲಾಗಿದ್ದಾಳೆ.
ಅಂದಿನ ಹೆಸ್ಕಾಂ ಸಹಾಯಕ ಅಧೀಕ್ಷಕ ಅಭಿಯಂತರ ತುಕಾರ ಮಜ್ಜಿಗೆ ಎಂಬಾತನ ಮೇಲೆ ದೂರುದಾರೆ ಅತ್ಯಾಚಾರ ಮತ್ತು ಜೀವ ಬೆದರಿಕೆ ಕೇಸ್ ದಾಖಲಿಸಿದ್ದರು.
ಏನಿದು ಪ್ರಕರಣ?
2014 ನವೆಂಬರ್ 19 ರಂದು ಮಾಳಮಾರುತಿ ಠಾಣೆಯಲ್ಲಿ ದೂರು ನೀಡಿದ್ದ ಬಿ.ವಿ ಸಿಂಧೂ ಎಂಬುವವರು ಅತ್ಯಾಚಾರ, ಜೀವ ಬೆದರಿಕೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಮೂರು ಕೇಸ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿದ್ದ ಮಾಳಮಾರುತಿ ಪೊಲೀಸರು, ಅತ್ಯಾಚಾರ, ಜೀವಬೆದರಿಕೆ ಹಾಕಿದ್ದು, ಸುಳ್ಳು ಎಂದು ತನಿಖೆಯಲ್ಲಿ ಬಯಲಾಗಿತ್ತು.
ಹದಿಮೂರು ಜನರಿಗೂ 3 ವರ್ಷ 6 ತಿಂಗಳು ಶಿಕ್ಷೆ
ಇನ್ನು ಈ ಕುರಿತು ಇತರೆ ಆರೋಪಗಳಿಂದ ಪ್ರಚೋದನೆಗೆ ಒಳಗಾಗಿ ಸುಳ್ಳು ದೂರು ನೀಡಿದ್ದಾಗಿ ಕೋರ್ಟ್ಗೆ ಸಿಂಧೂ ಅಫಿದಾವಿಟ್ ಸಲ್ಲಿಸಿದ್ದರು. 2017ರಲ್ಲಿ ದೂರುದಾರೆ ಸಿಂಧೂ ಸೇರಿ 13 ಜನರ ವಿರುದ್ಧ ಕೇಸ್ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನ ಸಾಕ್ಷಿದಾರರಿಂದ 81 ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಅಂದಿನಿಂದ ಸುಧೀರ್ಘ ವಿಚಾರಣೆ ನಡೆಸಿ ಇಂದು (ಗುರುವಾರ) ತೀರ್ಪು ಪ್ರಕಟ ಮಾಡಿದ್ದು, ಹದಿಮೂರು ಜನರಿಗೂ 3 ವರ್ಷ 6 ತಿಂಗಳು ಶಿಕ್ಷೆ ಪ್ರಕಟಿಸಿ ಹಾಗೂ ಎಲ್ಲಾ ಆರೋಪಿಗಳಿಗೂ ತಲಾ 86 ಸಾವಿರ ದಂಡ ವಿಧಿಸಿ ನ್ಯಾಯಾಧೀಶೆ ಎಲ್.ವಿಜಯಲಕ್ಷ್ಮಿದೇವಿ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.


























