ಪುತ್ತೂರು : ನಗರಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಕಾರ್ಯಕರ್ತರು ಈಗಿಂದಲೇ ಸಜ್ಜಾಗಬೇಕು ಇದಕ್ಕಾಗಿ ಕೆಲವೇ ದಿನಗಳಲ್ಲಿ ತಾತ್ಕಾಲಿಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಸರಕಾರದ ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ತಲುಪಿದೆ ಇದು ಪಕ್ಷಕ್ಕೆ ವರದಾನವಾಗಲಿದೆ ಎಂದು ಹೇಳಿದರು.

ನಗರಸಭಾ ವ್ಯಾಪ್ತಿಗಳಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನಡೆದಿದೆ. ರಾಜಕೀಯ ಮಾಡದೆ ಎಲ್ಲಾ ವಾರ್ಡುಗಳಲ್ಲಿಯೂ ಅಭಿವೃದ್ದಿ ಕಾರ್ಯಗಳು ನಡೆದಿದೆ. ಕಾಂಗ್ರೆಸ್ ಸರಕಾರ ಮಾಡಿದ ಅಭಿವೃದ್ಧಿ ಕೆಲಸವನ್ನು ನಾವು ಮಾಡಿದ್ದು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅವರಿಗೆ ಅಭಿವೃದ್ದಿ ಕೆಲಸ ಮಾಡ್ಲಿಕ್ಕೆ ಗೊತ್ತಿಲ್ಲ ಸುಳ್ಳು ಹೇಳಿ ಲಾಭ ಪಡೆಯುವುದು ಮಾತ್ರ ಬಿಜೆಪಿಗರ ಬಂಡವಾಳವಾಗಿದೆ ಎಂದು ಶಾಸಕರು ಹೇಳಿದರು.
ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಕೆಲಸ ಆಗಬೇಕು. ಆಸಕ್ತಿ ಇರುವ ವ್ಯಕ್ತಿಗಳನ್ನು ಮಾತ್ರ ಬೂತ್ ಅಧ್ಯಕ್ಷರನ್ನಾಗಿ ಮಾಡಬೇಕು. ವಾರ್ಡು ವಾರ್ಡುಗಳಲ್ಲಿ ಸಂಚರಿಸಿ ಕೆಲಸ ಮಾಡುವ ಮೂಲಕ ಪಕ್ಷ ಸಂಘಟಿಸಬೇಕು ಎಂದು ಹೇಳಿದರು.
ದೇಶದಲ್ಲೇ ಅತ್ಯಂತ ದೊಡ್ಡ ನೀಟ್ ಹಗರಣವಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಇರುವ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಅನ್ಯಾಯವಾದರೂ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಮೌನವಾಗಿದೆ. ಪ್ರತಿಭಟನೆ ಮಾಡದಂತೆ ಬಿಜೆಪಿ ತಡೆದಿದೆ. ಹಗರಣ ಜನರ ಬಳಿ ತಲುಪದಂತೆ ಮಾಡಿರುವ ಪ್ಲಾನ್ ಅವರದ್ದು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುತ್ತಿದ್ದರೆ ಎಬಿವಿಪಿ ಪ್ರತಿಭಟನೆ ಮಾಡುತ್ತಿತ್ತು. ತಮ್ಮ ಹಗರಣವನ್ನು ಮುಚ್ಚಿ ಹಾಕುವ ಮೂಲಕ ಜನರ ಕಣ್ಣಿಗೆ ಮಣ್ಣೆರಚಲು ಬಿಜೆಪಿ ಯತ್ನ ಮಾಡುತ್ತಿದೆ ಇದನ್ನು ಜನರಿಗೆ ತಿಳಿಸುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು.
ಕುಂಬ್ರಕ್ಕೆ ಸಿಟಿ ಬಸ್ ವ್ಯವಸ್ಥೆ ಮಾಡಿದ್ದು ನಾನು, ಕುಂಬ್ರದಲ್ಲಿ ಸಿಟಿಬಸ್ ಬಂದಾಗ ಅದನ್ನು ಉದ್ಘಾಟನೆ ಮಾಡಿ ಲಾಭ ಪಡೆಯಲು ಬಿಜೆಪಿಯವರು ಯತ್ನ ಮಾಡಿದ್ದರು. ಅದನ್ನು ತಡೆಯುವ ಕೆಲಸ ಕಾರ್ಯಕರ್ತರು ಮಾಡಿದ್ದಾರೆ. ಬಸ್ನ್ನು ಕೌಡಿಚ್ಚಾರ್ ವರೆಗೆ ಕಳುಹಿಸುವ ವ್ಯವಸ್ಥೆ ತಿಳಿಸಿದ್ದೆ ಇದು ಬಿಜೆಪಿಯವರಿಗೆ ಗೊತ್ತಾಗಿ ಗ್ರಾಪಂ ಪುಸ್ತಕದಲ್ಲಿ ನಿರ್ಣಯ ಮಾಡಿಸಿದ್ದಾರೆ ಇದೆಂತಾ ರಾಜಕೀಯ. ನಾವು ಮಾಡಿದ ಕೆಲಸಕ್ಕೆ ಬಿಜೆಪಿ ಲಾಭ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕರು ಹೇಳಿದರು.
ಸರಕಾರದಿಂದ ವಿವಿಧ ಯೋಜನೆಗಳು ಬರುತ್ತಲೇ ಇರುತ್ತದೆ ಅದನ್ನು ಕಾರ್ಯಕರ್ತರು ಅರಿತುಕೊಂಡು ಕಾರ್ಯಕರ್ತರಿಗೆ ತಿಳಿಸಬೇಕು. ಆನ್ ಲೈನ್ ಮೂಲಕ ಅರ್ಜಿ ಹಾಕಿ ಸೌಲಭ್ಯವನ್ನು ಪಡೆದುಕೊಳ್ಳಬೇಕು.
ಶಾಸಕರ ಕಚೇರಿಯಲ್ಲಿ ಶೀಘ್ರವೇ ಉಚಿತ ಆನ್ ಲೈನ್ ಸೇವೆ ಪ್ರಾರಂಭವಾಗಲಿದೆ. ಜನರು ಶಾಸಕರ ಕಚೇರಿಗೆ ಬಂದು ಯಾವುದೇ ಆನ್ ಲೈನ್ ಅರ್ಜಿಗಳನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗುವುದು ಎಂದು ಶಾಸಕರು ಹೇಳಿದರು.
ಸರಕಾರದಿಂದ ಎಲ್ಲಾ ಸೌಲಭ್ಯಗಳು ದೊರೆಯುತ್ತದೆ. ಅವುಗಳನ್ನು ತಿಳಿದು ಜನರಿಗೆ ತಲುಪಿಸುವ ಅಥವಾ ಮಾಹಿತಿ ನೀಡುವ ಕೆಲಸವನ್ನು ಕಾರದಯಕರ್ತರು ಮಾಡಬೇಕು. ಸರಕಾರದ ಸೌಲಭ್ಯದಿಂದ ಯಾರೂ ವಂಚಿತರಾಗದಂತೆ ನೋಡಿಕೊಳ್ಳಬೇಕು. ನಮ್ಮ ಕಾರ್ಯಕರ್ತರಿಗೆ ಸೌಲಭ್ಯ ಕೊಡಿಸುವ ಕೆಲಸ ಮಾಡಬೇಕು ಎಂದು ಶಾಸಕರು ಹೇಳಿದರು.
ಜನರ ಕೆಲಸ ಮಾಡಿ ಆ ಬಳಿಕ ವೋಟು ಕೇಳಿ. ಸುಳ್ಳು ಹೇಳಿ ಜನರನ್ನು ಮಂಗ ಮಾಡಬೇಡಿ. ಜನರು ಕರೆ ಮಾಡಿದರೆ ಫೋನ್ ಸ್ವೀಕರಿಸಿ ನಿಮ್ಮಿಂದ ಸಹಾಯ ಮಾಡುವುದಾದರೆ ಮಾಡಿ ಇಲ್ಲವಾದರೆ ಅಂಥವರ ನಂಬರನ್ನು ಕಚೇರಿಗೆ ಕೊಡಿ. ಜನ ಸಂಕಷ್ಟ ಇದ್ದರೆ ಮಾತ್ರ ನಿಮಗೆ ಕರೆ ಮಾಡುತ್ತಾರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ ಮಧ್ಯ ರಾತ್ರಿ ಕರೆ ಮಾಡಿದರೂ ಸ್ವೀಕರಿಸಿ ಅವರಿಗೆ ನೆರವು ಮಾಡಿ ಎಂದು ಶಾಸಕರು ಸಭೆಯಲ್ಲಿ ಸೂಚಿಸಿದರು.
ನಗರಸಭಾ ವ್ಯಾಪ್ತಿಯಲ್ಲಿ ಮನೆ ನಿವೇಶನಕ್ಕೆ ಸಾವಿರಾರು ಅರ್ಜಿಗಳು ಬಂದಿದೆ. ಅವರಿಗೆ ನಗರಸಭಾ ವ್ಯಾಪ್ತಿಯಲ್ಲಿ ಕೊಡಲು ಜಾಗವಿಲ್ಲ. ನಿವೇಶನ ಇಲ್ಲದವರು ಪಕ್ಕದ ಗ್ರಾ.ಪಂಗಳಲ್ಲಿ ಅರ್ಜಿ ಸಲ್ಲಿಸಬೇಕು. ಗ್ರಾಪಂ ಅರ್ಜಿ ಸ್ವೀಕರಿಸಬೇಕು ಎಂಬ ನಿಯಮವಿದೆ ಇದಕ್ಕಾಗಿ ರಾಜೀವ್ ಗಾಂಧಿ ನಿಗಮದ ಅಧಿಕಾರಿ ಜೊತೆ ಮಾತನಾಡಿದ್ದೇನೆ. ಬಡವರಿಗೆ ಸೈಟ್ ಕೊಡುವಲ್ಲಿ ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು.
76 ಫೈಲು ನನ್ನ ಬಳಿ ಇದೆ
ಕಳೆದ ಅವಧಿಯಲ್ಲಿ ಅಕ್ರಮ ಸಕ್ರಮ ಸಿಟ್ಟಿಂಗ್ ವೇಳೆ 3 ಲಕ್ಷ 5 ಲಕ್ಷ ಲಂಚ ಕೊಟ್ಟರೂ ಕಡತ ವಿಲೇವಾರಿ ಮಾಡಿಲ್ಲ ಎಂದು 76 ಜನ ನನ್ನಲ್ಲಿ ದೂರು ನೀಡಿದ್ದಾರೆ. ನಾನು ಏನು ಮಾಡುವುದು ಇವರು ಕೊಟ್ಟಿದ್ದಾರೆ ಅವರು ತಗೊಂಡಿದ್ದಾರೆ. ದುಡ್ಡು ತಗೊಂಡದ್ದಕ್ಕಾದರೂ ಮಾಡಿಕೊಡಬೇಕಿತ್ತು ಅದನ್ನೂ ಮಾಡಿಲ್ಲ. ಲಂಚ ತಗೊಂಡ ಫೈಲುಗಳು ಇನ್ನೆಷ್ಟು ಇದೆಯೋ ದೇವರೇ ಬಲ್ಲ. ಎಲ್ಲ 76 ಮಂದಿಗೂ ನಯಾ ಪೈಸೆ ಪಡೆಯದೆ ವಿಲೇವಾರಿ ಮಾಡುವಂತೆ ಸೂಚಿಸಿದ್ದೇನೆ ಎಂದು ಶಾಸಕರು ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ, ನಗರದ ಎಲ್ಲಾ ವಾರ್ಡುಗಳ ಅಭಿವೃದ್ದಿಗೆ ಶಾಸಕರು ಅನುದಾನ ನೀಡಿದ್ದಾರೆ. ಅಭಿವೃದ್ದಿ ಯೋಜನೆಯ ಜೊತೆಗೆ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತೀ ವಾರ್ಡುಗಳಲ್ಲಿ ಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಸರಕಾರದ ಜನಸ್ನೇಹಿ ಆಡಳಿತವನ್ನು ತಿಳಿಸಬೇಕಿದೆ. ನಗರಸಭಾ ವ್ಯಾಪ್ತಿಯಲ್ಲಿರುವ ಬಡವರನ್ನು ಹುಡುಕಿ ಅವರಿಗೆ ನೆರವು ನೀಡುವ ಕೆಲಸ ನಾವು ಮಾಡಬೇಕಿದೆ. ಬಿಜೆಪಿ ಕುತಂತ್ರದಿಂದ ಕಳೆದ ಅವಧಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲಾಗಿರಬಹುದು ಆದರೆ ಈ ಬಾರಿ ನಮ್ಮ ಸರಕಾರ ಇದೆ, ಶಾಸಕರೂ ಇದ್ದಾರೆ. ನಗರಸಭಾ ವ್ಯಾಪ್ತಿಯಲ್ಲಿಮನೆ ಇದ್ದು ಈಗ ಹೊರಗಡೆ ವಲಸೆ ಹೋಗಿರುವವರ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆಯುವುದು ಮತ್ತು ಮತದಾರ ಸೇರ್ಪಡೆ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಸಭೆಯಲ್ಲಿ ರೂಪರೇಖಾ ಆಳ್ವ, ಶೈಲ ಪೈ, ಶಾರದಾ ಅರಸ್, ನೆಬಿಸಾ, ಸಾಹಿರಾ ಬಾನು, ವಾಣಿಶ್ರೀ, ಯೂಸುಫ್ ಡ್ರೀಂ, ರಾಬಿನ್ ತಾವ್ರೋ, ರೋಶನ್ ರೈ ಬನ್ನೂರು, ವಿಕ್ಡರ್ ಪಾಯಸ್, ದಿನೇಶ್ , ರಿಯಾಝ್, ಶರೂನ್ಸಿಕ್ವೆರಾ, ಲೋಕೇಶ್ ಪಡ್ಡಾಯೂರು, ಪೂರ್ಣೇಶ್, ಸೂಫಿ ಬಪ್ಪಳಿಗೆ, ಸಿಂತ್ಯ ಡಿಸೋಜಾ, ದಾಮೋದರ್ ಭಂಡಾರ್ಕರ್ ಉಪಸ್ಥಿತರಿದ್ದರು.


























