ಪುತ್ತೂರು : ಪಾಕಿಸ್ತಾನದ ಸೈನಿಕರು ನಮ್ಮ ಮೇಲೆರಗಿ ಒಂದೇಸಮನೆ ಗುಂಡಿನ ದಾಳಿಗೈದುಬಿಟ್ಟರು. ಜೊತೆಗಿದ್ದ ಅಷ್ಟೂ ಮಂದಿ ಸ್ಥಳದಲ್ಲೇ ಮೃತಪಟ್ಟರೆ ತಾನು ಸತ್ತಂತೆ ನಟಿಸುತ್ತಾ ಬಿದ್ದಿದ್ದೆ. ಸತ್ತವರ ಮೇಲೆ ಮತ್ತೆ ಮತ್ತೆ ಗುಂಡಿನ ಸುರಿಮಳೆಯಾಗುತ್ತಿತ್ತು. ಆ ದಾಳಿಯಲ್ಲಿ ಕಾಲುಗಳು ಛಿದ್ರವಾದವು. ಆದರೂ ತುಟಿಪಿಟಕ್ಕೆನ್ನದೆ ಸಾವನ್ನು ಹತ್ತಿರದಿಂದ ಕಂಡು ಮನಸ್ಸು ಗಟ್ಟಿ ಮಾಡಿ ಕೈಯಲ್ಲಿದ್ದ ಗ್ರಾನೈಡ್ ಎಸೆದು ಪಾಕಿಸ್ತಾನದ ಸೈನಿಕರನ್ನು ಸುಟ್ಟುಹಾಕಿದೆ. ಇದ್ದಕ್ಕಿದ್ದಂತೆ ದಾಳಿಯಾದದ್ದನ್ನು ಕಂಡ ಪಾಕಿಸ್ತಾನಿ ಸೈನಿಕರು ಭಾರತದ ಮತ್ತೊಂದು ಸೇನಾ ತುಕಡಿ ತಮ್ಮನ್ನು ಆಕ್ರಮಿಸುತ್ತಿದೆ ಎಂದು ಭಾವಿಸಿ ಓಡತೊಡಗಿದರು. ಹಾಗೋ ಹೀಗೋ ರೈಫಲ್ ತೆಗೆದು ಮತ್ತೆ ಐದು ಜನ ಪಾಕಿಸ್ಥಾನದ ಸೈನಿಕರನ್ನು
ಹೊಡೆದುಹಾಕಿದೆ. ಅತಿ ಕಿರಿಯ ವಯಸ್ಸಿನಲ್ಲಿ ಭಾರತೀಯ ಸೈನ್ಯದಿಂದ ಕೊಡಮಾಡುವ ಅತ್ಯುಚ್ಚ ಪ್ರಶಸ್ತಿಯಾದ ಪರಮವೀರ
ಚಕ್ರವನ್ನು ಮುಡಿಗೇರಿಸಿಕೊಂಡ ಕ್ಯಾಪ್ಟನ್ ಯೋಗೀಂದ್ರ ಸಿಂಗ್
ಯಾದವ್ ಈ ಮಾತುಗಳನ್ನು ಹೇಳುತ್ತಿದ್ದರೆ ನೆರೆದಿದ್ದ
ಜನಸ್ತೋಮದ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.
ಇಂತಹದ್ದೊಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾದದ್ದು, ಪುತ್ತೂರಿನ ಕಿಲ್ಲೆ ಮೈದಾನ. ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರಿನ ಮಾಜಿ ಸೈನಿಕರ ಸಂಘ ಹಾಗೂ ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿಗಳು, ಇತರ ಸಂಘಟನೆಗಳ ಸಹಕಾರದೊಂದಿಗೆ ಕಾರ್ಗಿಲ್ ವಿಜಯೋತ್ಸವದ 25ನೇಯ
ವರ್ಷಾಚರಣೆಯನ್ನು ಇತಿಹಾಸದ ಪುಟದಲ್ಲಿ ದಾಖಲಾಗುವಂತೆ
ಆಯೋಜಿಸಿದ್ದರು.