ಸಾವು ಹೇಗೆ ಬೇಕಾದರೂ ಬರಬಹುದು. ನಿಂತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದವರು ಇದ್ದಾರೆ. ಮಲಗಿದಲ್ಲೇ ಕೊನೆಯುಸಿರೆಳೆದವರು ಇದ್ದಾರೆ. ಆದರೆ ಮನೆಗೆ ಬೆಳಕಾಗಿದ್ದ ಮಗನೋರ್ವ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.
ಮನೆ ಬಳಿ ಕಾಲು ಜಾರಿ ಬಿದ್ದು ತಲೆಗೆ ಗಾಯವಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆದರೆ ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ಅನೇಕರ ಬಾಳಿಗೆ ಬೆಳಕಾಗಿದ್ದಾನೆ.
ಕೋಲಾರ ನಗರದ ಅಂಬೇಡ್ಕರ್ ನಗರದ ನಿವಾಸಿ ಸಂಜೀವಪ್ಪ ಹಾಗೂ ವಿಜಯ್ ಕುಮಾರಿ ದಂಪತಿಗಳ ಏಕೈಕ ಪುತ್ರ ಸಂಜಯ್. ಇತ್ತೀಚೆಗೆ ಕಾಲು ಜಾರಿ ಬಿದ್ದು ತಲೆಗೆ ಗಾಯವಾಗಿ ತಲೆಯಲ್ಲಿ ರಕ್ತ ಹೆಪ್ಪು ಗಟ್ಟಿತ್ತು, ಪರಿಣಾಮ ಆತನನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆರ್.ವಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಬೆಂಗಳೂರಿನ ಆರ್.ವಿ ಆಸ್ಪತ್ರೆಗೆ ದಾಖಲಾದ ಸಂಜಯ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆದರೆ ಮಗನ ಸಾವಿನ ಬಳಿಕ ಆತನ ಪೋಷಕರು ಅಂಗಾಗಗಳನ್ನ ಬೇರೆ ಬೇರೆ ಆಸ್ಪತ್ರೆಗಳಿಗೆ ದಾನ ಮಾಡಿದ್ದಾರೆ.
ಸಂಜಯ್ ಹೃದಯ, ಕಣ್ಣು, ಕರುಳು, ಕಿಡ್ನಿಯನ್ನ ದಾನ ಮಾಡಿ ತನ್ನ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸಂಜಯ್ ಮಾಡಿದ ಈ ಪುಣ್ಯದ ಕೆಲಸದಿಂದ ಅನೇಕರ ಬಾಳು ಬೆಳಕಾಗಿದೆ.



























