ಉಡುಪಿ : ಮೊಬೈಲ್, ಜಗತ್ತನ್ನು ನಮ್ಮ ಅಂಗೈಯಲ್ಲಿ ತಂದಿಟ್ಟ ಒಂದು ಆವಿಷ್ಕಾರ. ಕಡಿಮೆ ದರದ ಇಂಟರ್ನೆಟ್ ಚಾರ್ಜ್, ಹೊಸದಾದ ಒಂದು ಆ್ಯಂಡ್ರಾಯ್ಡ್ ಮೊಬೈಲ್ ಇದ್ರೆ ಸಾಕು ನಮಗೆ ಜಗತ್ತಿನ ಪರಿಚಯವೇ ಆಗಿಬಿಡುತ್ತದೆ. ಅಪರಿಚತರು ಪರಿಚಿತರಾಗುತ್ತಾರೆ. ಪರಿಚಿತರು ಒಮ್ಮೊಮ್ಮೆ ಅಪರಿಚತರಾಗುತ್ತಾರೆ. ಪ್ರತಿಭೆಗಳಿಗೆ ವೇದಿಕೆಯಾಗುತ್ತದೆ. ಪ್ರತಿಭೆ ಅಂತ ತಮಗೆ ತಾವು ಅಂದು ಕೊಂಡವರಿಗೆ ಟ್ರೋಲ್ಗಳ ಪರಿಚಯವಾಗುತ್ತದೆ. ಇದಿಷ್ಟೇ ಅಲ್ಲ ಮೊಬೈಲ್ ರೀಲ್ಸ್ಗಳ ಗೀಳು ಪ್ರಾಣವನ್ನು ತೆಗೆದು ಬಿಡುತ್ತದೆ. ಅದಕ್ಕೆ ದೊಡ್ಡ ಸಾಕ್ಷಿಯೇ ಉಡುಪಿ ಜಿಲ್ಲೆಯಲ್ಲಿ ನಡೆದ ಈ ಘಟನೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕಿರಣ್ ಅನ್ನೋ ಯುವಕನನ್ನು ಪತ್ನಿಯ ರೀಲ್ಸ್ ಹುಚ್ಚು ನೋಡಲಾಗದೇ ತಾಳಲಾಗದೇ ಆಕೆಯನ್ನು ಬರ್ಬರವಾಗಿ ಕತ್ತರಿಸಿ ಹಾಕಿದ್ದಾನೆ.
ಕಿರಣ್ ಹಾಗೂ ಜಯಶ್ರೀ 4 ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ದೂರದ ಊರು ಬೀದರ್ನಿಂದ ಕಿರಣ್ ಜೊತೆ ಏಳು ಹೆಜ್ಜೆಯಿಟ್ಟುಕೊಂಡು ಉಡುಪಿಯ ಬ್ರಹ್ಮಾವರಕ್ಕೆ ಬಂದಿದ್ದಳು ಜಯಶ್ರಿ, ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದ್ರೆ ಪತ್ನಿಯ ಮೊಬೈಲ್ ವಿಪರೀತ ಬಳಸುತ್ತಾಳೆ ಅನ್ನೋ ಒಂದೇ ಕಾರಣಕ್ಕೆ ಕಿರಣ್ ಪತ್ನಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಜಯಶ್ರೀ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವತಿ. ಕಿರಣ್ ಬ್ರಾಹ್ಮಣ, ಯಾವುದೋ ಕಾರಣಕ್ಕೆ ಮನೆಯಲ್ಲಿ ತಕರಾರು ನಡೆದು, ದಂಪತಿ ಇದ್ದ ಮನೆಯನ್ನು ಬಿಟ್ಟು ಸಾಲಿಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಇಬ್ಬರ ಮಧ್ಯೆ ಆಗಾಗ ಜಗಳವಾಗ್ತಿತ್ತು. ಜಯಶ್ರೀಗೆ ಹಿಂದೊಂದು ಮದುವೆಯೂ ಆಗಿ ವಿಚ್ಛೇದನ ಪಡೆದಿದ್ದಳು.
ಮೊನ್ನೆ ರಾತ್ರಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಜಗಳ ತಾರಕಕ್ಕೇರುತ್ತಿದ್ದಂತೆ ಕಿರಣ್ ಕತ್ತಿಯಿಂದ ಪತ್ನಿ ಮೇಲೆ ಹಲ್ಲೆಗೈದಿದ್ದಾನೆ. ಪತ್ನಿ ದೇಹದ ಮೂರ್ನಾಲ್ಕು ಕಡೆ ಗಾಯವಾಗಿ ರಕ್ತಸ್ರಾವವಾಗಿದೆ. ಬಳಿಕ ಪತ್ನಿಯ ದೇಹವನ್ನ ಮನೆ ಮೇಲಿಂದ ಎಸೆದಿದ್ದಾನೆ. ನಂತರ ಪರಿಚಯಸ್ಥರಿಗೆ ಕರೆ ಮಾಡಿ ಪತ್ನಿ ಟೆರೇಸ್ ಮೇಲಿಂದ ಬಿದ್ದಿದ್ದಾಗಿ ಹೇಳಿದ್ದಾನೆ. ನಂತರ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ರವಾನಿಸಲಾಗಿದೆ. ಬಳಿಕ ವೈದ್ಯರ ಸೂಚನೆಯಂತೆ ಅಲ್ಲಿಂದ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡ್ಲಾಗಿದೆ. ಆದ್ರೆ, ಅಷ್ಟರಲ್ಲಾಗಲೇ ಜಯಶ್ರೀ ಕೊನೆಯುಸಿರೆಳೆದಿದ್ಲು.
ಆರೋಪಿಯನ್ನ ಕೋಟ ಪೊಲೀಸರು ಮನೆಯಿಂದ ವಶಕ್ಕೆ ಪಡೆಸಿದ್ದಾರೆ. ಆರೋಪಿಯನ್ನ ಪೊಲೀಸರು ತೀವ್ರ ವಿಚಾರಣೆಗೆ ನಡೆಸಿದಾಗ ಪತ್ನಿ ಮೊಬೈಲ್ನಲ್ಲಿ ಯಾವಾಗಲೂ ಬ್ಯುಸಿಯಾಗಿರುತ್ತಿದ್ದಳು. ಚಿನ್ನಕ್ಕಾಗಿ ಹಿಂಸೆ ಕೊಡುತ್ತಿದ್ದಳು. ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡುತ್ತಿದ್ದಳು ಈ ವೇಳೆ ಚಾಕುವಿನಿಂದ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯಶ್ರೀ ಮನೆಯವರು ಬೀದರ್ನಿಂದ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಕೋಪದ ಕೈಗೆ ಬುದ್ಧಿ ಕೊಟ್ಟು ಪತ್ನಿಯ ಪ್ರಾಣ ಪಕ್ಷಿ ಹಾರಿಹೋಗಿದೆ. ಪತಿ ಕಂಬಿ ಹಿಂದೆ ಕಾಲ ಕಳೆಯುವಂತಾಗಿದೆ.



























