ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಅವವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ನಾಲ್ವರು ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಿ ಸಿಬ್ಬಂದಿಗಳ ಕರ್ತವ್ಯ ಬದಲಿಸಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಲಡ್ಡು ತಯಾರಿಕೆಯಾಗಿರುವ ಸಂಖ್ಯೆ ಮತ್ತು ಅದರ ವಿತರಣೆಯಲ್ಲಿ ಸಾಮ್ಯತೆ ಇಲ್ಲದೇ ರಶೀದಿ ಮತ್ತು ಇತರೇ ಹೆಚ್ಚುವರಿ ಲಡ್ಡು ವಿತರಣೆ ಆಗಿರುವುದರ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
ಲಡ್ಡು ಪ್ರಸಾದದ ಬಗ್ಗೆ ಬಂದ ದೂರನ್ನು ಪರಿಗಣಿಸಿ ದೇಗುಲದ ಆಡಳಿತಧಿಕಾರಿ, ಸಹಾಯಕ ಆಯುಕ್ತ ಜುಬಿನ್ ಮಹಾಪತ್ರ ರವರ ಆದೇಶದ ಮೇರೆಗೆ ದೇವಳದ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಕ್ರಮ ಕೈಗೊಂಡಿದ್ದಾರೆ.
ಲಾಡು ಪ್ರಸಾದ ನೀಡುವ ಕೌಂಟರ್ ನಲ್ಲಿ ರಶೀದಿ ನೀಡಿದವರಿಗೆ ಮಾತ್ರ ಪ್ರಸಾದ ನೀಡಬೇಕು ಎಂದು ಕಾರ್ಯ ನಿರ್ವಹಣಾಧಿಕಾರಿಗಳು ಮರು ಆದೇಶ ನೀಡಿರುವುದಾಗಿ ತಿಳಿದು ಬಂದಿದೆ.
ಮುಂಜಾಗ್ರತಾ ಕ್ರಮವಾಗಿ ಅವ್ಯವಹಾರ ಆಗಿರುವ ಸ್ಥಳದಲ್ಲಿ ಹಾಗೂ ಲಡ್ಡು ತಯಾರಿಕೆ ಮಾಡುವ ಸ್ಥಳದಲ್ಲಿ ನಾಲ್ಕು ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ.

























