ಉಡುಪಿ : ಹಿಂದೂ ಧರ್ಮ, ರಾಮ ಮಂದಿರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಲ್ಲದೇ, ಇಸ್ಲಾಂಗೆ ಮತಾಂತರವಾಗುವಂತೆ ಸಹಪಾಠಿಗೆ ಕಿರುಕುಳ ನೀಡಿದ ಆರೋಪದ ಮೇಲೆ ವೈದ್ಯಕೀಯ ವಿದ್ಯಾರ್ಥಿ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ವೈದ್ಯಕೀಯ ವಿದ್ಯಾರ್ಥಿ ಮಹಮ್ಮದ್ ಡ್ಯಾನಿಷ್ ಖಾನ್ (27) ಕಿರುಕುಳ ನೀಡಿದ ಆರೋಪಿ.
ಮಹಮ್ಮದ್ ಡ್ಯಾನಿಷ್ ಖಾನ್ ಮಣಿಪಾಲ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದನು. ಈ ವೇಳೆ ತನ್ನ ಜೊತೆ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿಯ ಜೊತೆ ಸ್ನೇಹ ಬೆಳೆಸಿದ್ದಾನೆ. ಇಬ್ಬರೂ ಹೊರ ರಾಜ್ಯದವರಾಗಿದ್ದು, ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಬಂದಿದ್ದಾರೆ.
ಇಬ್ಬರ ನಡುವೆ ಸ್ನೇಹ ಬೆಳೆದ ನಂತರ, ಪರಸ್ಪರ ಫೋನ್ ನಂಬರ್ ಬದಲಾಯಿಸಿಕೊಂಡಿದ್ದಾರೆ. ಮುಂದೆ, ಗೆಳೆತನ ಪ್ರೀತಿಗೆ ತಿರುಗಿದೆ. ಇಬ್ಬರು ಪರಸ್ಪರ ಗಾಢವಾಗಿ ಪ್ರೀತಿಸಲು ಆರಂಭಿಸಿದ್ದಾರೆ. ನಂತರ, ಜನವರಿ 22 ರಂದು ರಾಮ ಮಂದಿರ ಉದ್ಘಾಟನೆ ವೇಳೆ ಮಹಮ್ಮದ್ ಡ್ಯಾನಿಷ್ ಖಾನ್, ಪ್ರೇಯಸಿಯ ಎದುರು ಹಿಂದೂ ಧರ್ಮ ಹಾಗೂ ರಾಮ ಮಂದಿರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಮಾರ್ಚ್ 11 ರಂದು ಮಹಮ್ಮದ್ ಡ್ಯಾನಿಷ್ ಖಾನ್, ತನ್ನ ಪ್ರೇಯಸಿಯ ರೂಮ್ಗೆ ಹೋಗಿದ್ದಾನೆ. ಈ ವೇಳೆ ಪ್ರೇಯಸಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದಾನೆ. ಆಗ, ಪ್ರೇಯಸಿ ನಿರಾಕರಿಸಿದಾಗ ಮಹಮ್ಮದ್ ಡ್ಯಾನಿಷ್ ಖಾನ್, ಆಕೆಯ ಕೆನ್ನೆಗೆ ಹೊಡೆದು, ಕೂದಲು ಹಿಡಿದು ಎಳೆದಿದ್ದಾನೆ. ಅಲ್ಲದೇ, ದೇಹದ ಖಾಸಗಿ ಭಾಗವನ್ನು ಮುಟ್ಟಿ ಲೈಂಗಿಕತೆಗೆ ಬೇಡಿಕೆ ಇಟ್ಟಿದ್ದಾನೆ. ನಿರಂತರವಾಗಿ, ಪೋನ್ನಲ್ಲಿ ಕಿರುಕುಳ ಕೊಡಲು ಆರಂಭಿಸಿದ್ದಾನೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ದಾಖಲಿಸಿದ್ದಾಳೆ.
ಈತನ ಕಿರುಕುಳದಿಂದ ರೋಸಿ ಹೋದ ವಿದ್ಯಾರ್ಥಿನಿ ಆಗಸ್ಟ್ 31 ರಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕೂಡಲೇ ಪೊಲೀಸರು ಮಹಮ್ಮದ್ ಡ್ಯಾನಿಷ್ ಖಾನ್ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.



























