ಬೆಂಗಳೂರು : ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ನಡೆಸಿ ಬಾಂಗ್ಲಾದೇಶ ಮೂಲದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ರಕ್ಷಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು, ಬೆಳ್ತಂಗಡಿ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಯುವಕನ ಸಹಿತ ಮೂವರನ್ನು ಬಂಧಿಸಿದ್ದಾರೆ.
ಮೂಲತಃ ಬೆಳ್ತಂಗಡಿ ನಿವಾಸಿ, ಬೆಂಗಳೂರಿನಲ್ಲಿ ವಾಸವಾಗಿದ್ದ ಟೆಕ್ಕಿ ಸುಬ್ರಹ್ಮಣ್ಯ ಶಾಸ್ತ್ರಿ, ಬೆಂಗಳೂರಿನ ಹೊಂಗಸಂದ್ರದ ಕರಿಷ್ಮಾ ಶೇಖ್ (ಮುಸ್ಕಾನ್) (23) ಹಾಗೂ ಬೆಂಗಳೂರಿನ ಶಾಂತಿಪುರದ ಸೂರಜ್ ಸಾಹಜೀ(26) ಬಂಧಿತರು.
ಕರಿಷ್ಮಾ ಹಾಗೂ ಸೂರಜ್ ಪಶ್ಚಿಮ ಬಂಗಾಳದವರಾಗಿದ್ದು, ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಉದ್ಯೋಗದ ನೆಪದಲ್ಲಿ ಬಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಅದಕ್ಕಾಗಿ ಗೋವಿಂದಪುರದಲ್ಲಿ ಮನೆ ಬಾಡಿಗೆಗೆ ಪಡೆದು ದಂಧೆ ನಡೆಸುತ್ತಿದ್ದರು.
ದಂಧೆಗೆ ಬಾಂಗ್ಲಾದೇಶದ 15 ಮತ್ತು 16 ವರ್ಷದ ಇಬ್ಬರು ಬಾಲಕಿಯರನ್ನು ಆರೋಪಿಗಳು ಕರೆತಂದಿದ್ದು, ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು.
ಬಂಧಿತರಲ್ಲಿ ಕರಿಷ್ಮಾ ಬಾಂಗ್ಲಾದೇಶದ ಮೂಲದವಳಾಗಿರುವ ಶಂಕೆಯಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.