ಬೆಂಗಳೂರು : ರಾಜ್ಯಾದ್ಯಂತ ಮಳೆಯ ಪ್ರಮಾಣ ತಗ್ಗಿ ಮತ್ತೆ ಬೇಗೆಯ ಅನುಭವ ಉಂಟಾಗುತ್ತಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮಿತಿಗಿಂತ ಹೆಚ್ಚಿನ ಗರಿಷ್ಠ ತಾಪಮಾನ ದಾಖಲಾಗಿದೆ.
ಕರ್ನಾಟಕದಲ್ಲಿ ಸೆಪ್ಟೆಂಬರ್ನಲ್ಲಿ ಕಳೆದ ಕೆಲವು ವರ್ಷಗಳಿಂದ ವರ್ಷಧಾರೆ ಸುರಿದು ಚಳಿಯ ವಾತಾವರಣ ಇರುತ್ತಿತ್ತು. ಆದರೆ, ಈ ಬಾರಿ ಸೆಪ್ಟೆಂಬರ್ನಲ್ಲಿ ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನವು ಏರಿಕೆಯಾಗಿದೆ. ಪರಿಣಾಮ ಬೇಗೆಯ ವಾತಾವರಣ ಉಂಟಾಗುತ್ತಿದೆ. ತಾಪಮಾನವು ಇನ್ನಷ್ಟು ಹೆಚ್ಚಾಗುವ ಲಕ್ಷಣ ಗೋಚರಿಸಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ
ಭೂಮಿಯಲ್ಲಿ ತೇವಾಂಶ ಕಡಿಮೆಯಾದರೆ ಗಾಳಿಯಲ್ಲಿ ನೀರಿನ ಅಂಶವಿಲ್ಲದೆ ತಾಪಮಾನ ಕಡಿಮೆಯಾಗುತ್ತದೆ. ಆದರೆ, ಈ ಹವಾಮಾನದ ವಾತಾವರಣ ಇಲ್ಲದಿರುವುದರಿಂದ ಬೇಗೆ ಉಂಟಾಗುತ್ತಿದೆ. ಬಂಗಾಳ ಉಪಸಾಗರದಲ್ಲಿ ಟ್ರಫ್ ಉಂಟಾದರೆ ಅದು ಉತ್ತರ ಕರ್ನಾಟಕದ ಬಹುತೇಕ ಭಾಗಗಳಿಗೆ ಮಳೆಯಾಗುತ್ತದೆ.
ಬಂಗಾಳ ಉಪಸಾಗರದಲ್ಲಿ ಲೋಫ್ರೆಜರ್ ಉಂಟಾಗಿ ಅವುಗಳ ಪ್ರಭಾವದಿಂದ ಉತ್ತರ ಕರ್ನಾಟಕದ ಕಡೆಗೆ ಹೆಚ್ಚಿನ ಗಾಳಿ ಬೀಸಿದರೆ ಈ ಭಾಗಗಳಲ್ಲೂ ಮಳೆಯಾಗುತ್ತದೆ. ಮಳೆಯಾದರೆ ತಾಪಮಾನ ಕೊಂಚ ಇಳಿಕೆಯಾಗಲಿದೆ.
ಬೆಂಗಳೂರಿನಲ್ಲಿ 1.3 ಡಿ.ಸೆ., ಹಾಸನದಲ್ಲಿ 5.7, ಮೈಸೂರು 2.7, ಮಂಡ್ಯ 2.6, ದಾವಣಗೆರೆ 2.8, ಕೊಪ್ಪಳ 2.8, ಮಂಗಳೂರು 1.6, ಬಾಗಲಕೋಟೆ 1.9, ಹಾವೇರಿ 1.9, ಕಾರವಾರ 2.7, ವಿಜಯಪುರ 0.8, ಧಾರವಾಡದಲ್ಲಿ 0.5 ಡಿ.ಸೆ. ಗರಿಷ್ಠ ತಾಪಮಾನವು ಮಿತಿಗಿಂತ ಹೆಚ್ಚಳವಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಬುಧವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಳಗಾವಿ, ವಿಜಯಪುರ, ಕಲಬುರಗಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.


























