ರಾಯಚೂರು : ಮುಜರಾಯಿ ಇಲಾಖೆಯಿಂದ ಮಠಮಾನ್ಯಗಳು, ದೇವಸ್ಥಾನಗಳು, ಧಾರ್ಮಿಕ ಶ್ರದ್ಧಾಕೇಂದ್ರಗಳು ಮುಕ್ತವಾಗಬೇಕು ಎಂದು ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಆಗ್ರಹಿಸಿದ್ದಾರೆ.
ತಿರುಪತಿ ಲಡ್ಡು ವಿವಾದದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿರುವ ಅವರು, ಸ್ವಾತಂತ್ರ್ಯದ ಪೂರ್ವದಲ್ಲಿ ಆಯಾ ಮಠ ಮಾನ್ಯಗಳು ಅದರ ಭಕ್ತರು, ಶಿಷ್ಯರು ಹಾಗೂ ಆಯಾ ಸಮುದಾಯದ ನೇತೃತ್ವದಲ್ಲಿ ಅವುಗಳ ನಿರ್ವಹಣೆ ನಡೆಯುತ್ತಿತ್ತು. ಲೌಖಿಕ ಕಾನೂನುಗಳು ಬಂದ ನಂತರ ಇದೆಲ್ಲ ಸರ್ಕಾರದ ವಶಕ್ಕೆ ಹೋಗಿದೆ. ಸರ್ಕಾರ ಹಾಗೂ ರಾಜಕೀಯದಿಂದ ತೊಂದರೆ ಆಗ್ತಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಒಂದು ಭಾಗದಲ್ಲಿರುವ ಮಠ, ಮಾನ್ಯಗಳು, ಆಯಾ ಭಾಗದ ಭಕ್ತರು, ಆ ಪ್ರಾಂತ್ಯದ ನೇತೃತ್ವದಲ್ಲಿ ನಡೆಯಬೇಕು. ಅದಕ್ಕೆ ಸನಾತನ ಧರ್ಮ ಪರಿರಕ್ಷಣಾ ಸಂಬಂಧವಾದಂತಹ ಒಂದು ಯೋಜನೆಯನ್ನು ನಾವು ಬೆಂಬಲಿಸುತ್ತೇವೆ. ನಮ್ಮೂರಿನ ದೇವಾಲಯಗಳ, ನಮ್ಮೂರಿನ ಪದ್ಧತಿಗಳ ಬಗ್ಗೆ ಎಲ್ಲಿಯೋ ಇದ್ದವರು, ಬೇರೆ ಯಾರೋ ಬಂದು ಹೇಳುವುದು ಅಲ್ಲ. ನಮ್ಮ ಊರಿನ ಹಿರಿಯರು, ಸಮುದಾಯದ ಹಿರಿಯರು, ಸಮುದಾಯದ ವಿಧ್ವಾಂಸರು, ಮಠಾಧಿಪತಿಗಳು, ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ನಡೆಯಬೇಕು. ಮುಜರಾಯಿ ಇಲಾಖೆಯಿಂದ ಖಂಡಿತ ಮುಕ್ತಗೊಳಿಸಬೇಕು. ಈ ಮುಜರಾಯಿ ಇಲಾಖೆಯಿಂದ ಮಠಮಾನ್ಯಗಳು, ದೇವಸ್ಥಾನಗಳು, ಧಾರ್ಮಿಕ ಶ್ರದ್ಧಾಕೇಂದ್ರಗಳು ಮುಕ್ತವಾಗಬೇಕು ಎಂದು ನಾವು ಒಕ್ಕರಣೆಯಿಂದ ಆಗ್ರಹಿಸುತ್ತೇವೆ.
ಮಠ, ಮಾನ್ಯಗಳು, ದೇವಾಲಯಗಳು ಎಲ್ಲಿ ಇವೆಯೋ, ಅವು ಆ ಪ್ರಾಂತ್ಯದ ಭಕ್ತರಿಗೆ, ಅಲ್ಲಿನ ಶ್ರದ್ಧಾ ಭಕ್ತಿಗೆ ಸಂಬಂಧಿಸಿದ ಕೇಂದ್ರಗಳು. ಇದನ್ನು ಎಲ್ಲಿಯೋ ಕುಳಿತು ನಡೆಸಲು ಆಗುವುದಿಲ್ಲ. ಇಲ್ಲಿ ಲೋಪ, ದೋಷಗಳಿದ್ದಾಗ ಮಾತ್ರ ಸರ್ಕಾರ ಅದನ್ನು ಪರಿಶೀಲಿಸಿ ಸರಿಪಡಿಸುವ ಅಧಿಕಾರ ಇದೆಯೇ ಹೊರತು ಅದನ್ನು ಸ್ವಾಧೀನ ಮಾಡಿಕೊಂಡು, ಆ ವಿಚಾರದಲ್ಲಿ ತಲೆ ಹಾಕಿ ಅಲ್ಲಿರುವ ಪವಿತ್ರ್ಯತೆಯನ್ನು, ಸಂಪ್ರದಾಯವನ್ನು ಬದಲಾಯಿಸುವ ಅಧಿಕಾರ ಇಲ್ಲ. ನಮ್ಮ ಅಂಬೇಡ್ಕರ್ ನೀಡಿರುವ ಸಂವಿಧಾನದಲ್ಲೂ ಕೂಡ ಆ ರೀತಿಯ ಅವಕಾಶ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.