ಸುಳ್ಯ : ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಡನೆ ಅಬ್ದುಲ್ ನಿಯಾಝ್ ಎಂಬ ಯುವಕ ಅನುಚಿತವಾಗಿ ವರ್ತಿಸಿದ್ದು, ಸುಳ್ಯದಲ್ಲಿ ಆಕೆಯ ಸಹಪಾಠಿ ವಿದ್ಯಾರ್ಥಿಗಳು ಧರ್ಮದೇಟು ನೀಡಿದ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನಿಂದ ಸುಬ್ರಹ್ಮಣ್ಯ ರಸ್ತೆಯಾಗಿ ಸುಳ್ಯಕ್ಕೆ ಬರುತ್ತಿದ್ದ ಸರಕಾರಿ ಬಸ್ ಗೆ ಬಿಸ್ಲೆ ಘಾಟ್ ಬಳಿ ಸುಳ್ಯದ ಕಾಲೇಜೊಂದರ ವಿದ್ಯಾರ್ಥಿನಿ ಹತ್ತಿದ್ದಳು. ಯುವಕನೊಬ್ಬ ಕುಳಿತಿದ್ದ ಸೀಟಿನ ಬಳಿ ಸೀಟು ಖಾಲಿ ಇದ್ದುದರಿಂದ ಆಕೆ ಅಲ್ಲಿ ಕುಳಿತಿದ್ದು, ಸ್ವಲ್ಪ ಸಮಯದ ಬಳಿಕ ಪಕ್ಕದಲ್ಲಿದ್ದ ಯುವಕ ಆಕೆಯೊಡನೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಈ ವಿಚಾರವನ್ನು ಆಕೆ ಬಸ್ ನಿರ್ವಾಹಕನ ಬಳಿ ತಿಳಿಸಿದ್ದು, ಬಳಿಕ ಇತರ ಪ್ರಯಾಣಿಕರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ವಿಚಾರವನ್ನು ವಿದ್ಯಾರ್ಥಿನಿ ತನ್ನ ಸಹಪಾಠಿಗಳಿಗೆ ಫೋನ್ ಮಾಡಿ ತಿಳಿಸಿದ್ದಳು.
ಅನುಚಿತವಾಗಿ ವರ್ತಿಸಿದ ಯುವಕ ಸುಬ್ರಹ್ಮಣ್ಯದಲ್ಲಿ ಬಸ್ನಿಂದ ಇಳಿದು ತೆರಳಿದ್ದು, ಆತ ಅನ್ಯಕೋಮಿನ ಯುವಕ ಎಂಬುದು ಸಹ ಪ್ರಯಾಣಿಕರಿಗೆ ಗೊತ್ತಾಗಿತ್ತೆನ್ನಲಾಗಿದೆ.
ಪೈಚಾರಿನಲ್ಲಿ ಕಾದು ಕುಳಿತಿದ್ದ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಆ ವೇಳೆ ಅಲ್ಲಿಗೆ ಬಂದ ಪೊಲೀಸರು ಗುಂಪಿನಿಂದ ಯುವಕನನ್ನು ಬಿಡಿಸಿ ಆಸ್ಪತ್ರೆಗೆ ಕಳುಹಿಸಿದರೆಂದು ತಿಳಿದು ಬಂದಿದೆ.
ಹಲ್ಲೆಗೊಂಡ ಅಬ್ದುಲ್ ನಿಯಾಜ್ ಆಸ್ಪತ್ರೆಯಲ್ಲಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.