ಹುಬ್ಬಳ್ಳಿ : ಮಹಿಳೆಗೆ ಚಾಕು ಇರಿದಿದ್ದ ಆರೋಪಿ ಮಹೇಶ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ವಿಚಾರಣೆ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗುವಾಗ ಕಾಲಿಗೆ ಗುಂಡೇಟು ಹೊಡೆಯಲಾಗಿದೆ.
ಗಾಯಾಳು ಮಹಿಳೆ ನೀಲಾ ಹಂಪಣ್ಣವರ್ ಮಗಳಿಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ. ಈ ಹಿನ್ನಲೆ ನೀಲಾ ಅವರು ಮಹೇಶ್ಗೆ ಬುದ್ಧಿವಾದ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಮಹೇಶ್, ಮಹಿಳೆಗೆ ಚಾಕು ಇರಿದಿದ್ದ. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು.
ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳು ಮಹೇಶ್ಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಹುಬ್ಬಳ್ಳಿಯ ಲೂಹಿಯಾ ನಗರದಲ್ಲಿರುವ ನೀಲಾ ಹಂಪಣ್ಣವರ ಮನೆಗೆ ನುಗ್ಗಿ ಆತ ಚಾಕು ಹಾಕಿದ್ದಾನೆ. ಸಿಕ್ಕ ಸಿಕ್ಕವರಿಗೆ ಬೆದರಿಕೆ ಕೂಡ ಹಾಕಿದ್ದ. ಗಾಯಾಳು ನೀಲಾ ಹಂಪಣ್ಣನವರಿಗೆ ಒಟ್ಟು ಐದು ಜನ ಹೆಣ್ಣುಮಕ್ಕಳು ಇದ್ದಾರೆ. ಅವರ ಮಗಳೋರ್ವಳಿಗೆ ಮದುವೆಯಾಗುವಂತೆ ಒತ್ತಾಯ ಮಾಡಿದ್ದ. ಕಳೆದ ಐದು ವರ್ಷದ ಹಿಂದೆ ಇದನ್ನು ಸರಿ ಮಾಡಲಾಗಿತ್ತು.
ಮಹೇಶ್ ಐದು ವರ್ಷದಿಂದ ಅವಳ ಪ್ರತಿಯೊಂದು ಚಲನವಲನವನ್ನು ಗಮನಿಸುತ್ತಿದ್ದ. ನೀಲಾ ಹಂಪಣ್ಣವರ್ ಮನೆಗೆ ನುಗ್ಗಿ ಚಾಕು ಇರಿದಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ. ಆತ ಚಾಕು ಇರಿಯಬೇಕು ಎನ್ನುವ ಉದ್ದೇಶಕ್ಕೆ ಸ್ನೇಹಿತರ ಬಳಿ ಸಾಲ ಕೂಡ ಪಡೆದಿದ್ದ. 20 ಸಾವಿರ ಸಾಲ ಪಡೆದುಕೊಂಡು ಚಾಕು ಹಾಕಿ ಪರಾರಿಯಾಗಲು ಮುಂದಾಗಿದ್ದ. ಪೊಲೀಸರು ಅರೆಸ್ಟ್ ಮಾಡಿದಾಗ, ಸ್ನೇಹಿತರನ್ನು ತೋರಿಸುತ್ತೇನೆ ಎಂದು ಕರೆದುಕೊಂಡು ಹೋಗಿದ್ದ. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಹಳೇ ಹುಬ್ಬಳ್ಳಿಯ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರ ಫೈರ್ ಮಾಡಿದ್ದಾರೆ. ಪೊಲೀಸರು ಇಷ್ಟು ಅಲರ್ಟ್ ಆಗಿದ್ದರು, ಘಟನೆ ನಡೆದಿದ್ದು ದುರಾದೃಷ್ಟಕರ ಎಂದರು.
ಘಟನೆ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಗಾಯಾಳು ನೀಲಾ ಹಂಪಣ್ಣವರಿಗೆ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.