ಮಂಗಳೂರು : ಮಳವೂರು ರೈಲ್ವೇ ಸೇತುವೆಯ ಬಳಿ ಫಲ್ಗುಣಿ ನದಿಯ ನೀರಿನಲ್ಲಿ ಈಜಾಡಲು ತೆರಳಿದ್ದ ನಾಲ್ಕು ಮಂದಿಯಲ್ಲಿ ಇಬ್ಬರು ನೀರಿನ ಸುಳಿಗೆ ಸಿಲುಕಿ ನೀರುಪಾಲಾದ ಘಟನೆ ಸಂಭವಿಸಿದೆ.
ಸ್ನೇಹಿತರಾದ ಮಂಗಳೂರು ನಗರದ ಕೋಡಿಕಲ್ನ ನಿವಾಸಿಗಳಾದ ಅರುಣ್ (19), ದೀಕ್ಷಿತ್ (20), ಕೊಟ್ಟಾರ ಚೌಕಿಯ ಸುಮಿತ್ (20) ಹಾಗೂ ಉರ್ವಸ್ಟೋರಿನ ಅನಿಶ್ (19) ಅವರು ಮಳವೂರು ರೈಲ್ವೇ ಸೇತುವೆಯ ಬಳಿ ಫಲ್ಗುಣಿ ನದಿಯಲ್ಲಿ ಈಜಾಡಲು ಹೋಗಿದ್ದರು. ಇವರಲ್ಲಿ ಕೊಟ್ಟಾರ ಚೌಕಿಯ ಸುಮಿತ್ (20) ಹಾಗೂ ಉರ್ವಸ್ಟೋರಿನ ಅನಿಶ್ (19) ನದಿ ನೀರಿನ ಸುಳಿಗೆ ಸಿಲುಕಿಕೊಂಡು ನೀರುಪಾಲಾಗಿದ್ದಾರೆ.
ಬಜಪೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿದ್ದು, ನದಿಯ ನೀರಿನಲ್ಲಿ ಇಬ್ಬರ ಹುಡುಕಾಟವನ್ನು ಆರಂಭಿಸಿದರು. ಅಗ್ನಿಶಾಮಕದ ಬೆಳಕಿನ ವ್ಯವಸ್ಥೆಯೊಂದಿಗೆ ತಡರಾತ್ರಿಯವರೆಗೂ ಶೋಧ ಕಾರ್ಯ ಮುಂದುವರಿದಿತ್ತು. ಸ್ಥಳಕ್ಕೆ ಮುಳುಗು ತಜ್ಞರನ್ನು ಕೂಡ ಕರೆಸಿಕೊಳ್ಳಲಾಗಿದೆ. ಬಜಪೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೀಪ್ ಜಿ.ಎಸ್. ಮತ್ತು ಸಿಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಇದ್ದಾರೆ. ಯುವಕರಿಬ್ಬರು ನೀರಿನಲ್ಲಿ ಮುಳುಗಿದ ಸುದ್ದಿ ಕೇಳಿ ಹಲವಾರು ಮಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.