ಮಡಿಕೇರಿ : ಬ್ಯಾಂಕಾಕ್ನಿಂದ ದುಬೈಗೆ ಕೊಡಗಿನ ಮೂಲಕ ದುಬಾರಿ ಬೆಲೆಯ ಮಾದಕವಸ್ತು ಹೈಡ್ರೋ ಗಾಂಜಾವನ್ನು ಸಾಗಾಣಿಕೆ ಮಾಡುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಕೊಡಗು ಜಿಲ್ಲಾ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳ ರಾಜ್ಯದವರೂ ಸೇರಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ ಸುಮಾರು 3 ಕೋಟಿ ರೂ. ಬೆಲೆ ಬಾಳುವ 3.31 ಕೆಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಮೆಹರೂಫ್ (37), ರವೂಫ್ (28), ನಾಸೀರ್ (26), ಹೆಚ್. ಯಾಹ್ಯಾಸಿ (28), ಅಕನಾಸ್ವ (26), ವಾಜೀಧ್ (26), ರಿಯಾಜ್ (44) ರನ್ನ ಮಾಲ್ ಸಮೇತ ಬಂಧನ ಮಾಡಲಾಗಿದೆ.
ಆರೋಪಿಗಳು ಮಾದಕವಸ್ತುವನ್ನು ಬ್ಯಾಂಕಾಕ್ನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕೊಡಗಿಗೆ ತರುತ್ತಿದ್ದರು. ನಂತರ, ದುಬೈಗೆ ವಿಮಾನದ ಮೂಲಕ ಸಾಗಾಣಿಕೆ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಏನಿದು ಹೈಡ್ರೋಪೋನಿಕ್ ಗಾಂಜಾ?
ಕೃತಕ ಬೆಳಕನ್ನು ಬಳಸಿ, ಹವಾನಿಯಂತ್ರಿಕ ಕೊಠಡಿಯಲ್ಲಿ ಬೆಳೆಯುವ ಹೈಡ್ರೋ ಗಾಂಜಾ ಬ್ಯಾಂಕಾಕ್ನಲ್ಲಿ ಸುಲಭವಾಗಿ ಸಿಗುತ್ತಿದೆ. ಇದನ್ನು ಶ್ರೀಮಂತರು ಮಾತ್ರವೇ ದುಬಾರಿ ಬೆಲೆ ನೀಡಿ ಬಳಸುತ್ತಾರೆ. ಸದ್ಯ, ಆರೋಪಿಗಳು ಸ್ಥಳೀಯರಿಗೆ ಮಾರಾಟ ಮಾಡುವ ವಿಷಯ ಗೊತ್ತಾಗಿಲ್ಲ. ಇವರೆಲ್ಲರೂ ಬ್ಯಾಂಕಾಕ್ನಿಂದ ತಂದ ಮಾದಕವಸ್ತುವನ್ನು ಇಂಡಿಯಾ ಏಪೋರ್ಟ್ಗಳ ಮೂಲಕ ಪ್ರವಾಸಿಗರ ಸೋಗಿನಲ್ಲಿ ದುಬೈಗೆ ಸಾಗಾಣಿಕೆ ಮಾಡುವ ಸಲುವಾಗಿ ಕೊಡಗಿನ ಗೋಣಿಕೊಪ್ಪಲಿನ ಮನೆಯೊಂದರಲ್ಲಿ ಇಟ್ಟಿದ್ದರು. ಬಳಿಕ ಗೋಣಿಕೋಪ್ಪದಿಂದ ಮಡಿಕೇರಿಗೆ ತರುವಾಗ ಮಡಿಕೇರಿ ನಗರದ ಪೋಲಿಸರು 5 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.
ಮತ್ತೊಬ್ಬ ಆರೋಪಿಯನ್ನು ಬೆಂಗಳೂರಿನಲ್ಲಿ ಹಾಗೂ ಪರಾರಿಯಾಗಲು ಯತ್ನಿಸುತ್ತಿದ್ದ ಪ್ರಮುಖ ಆರೋಪಿ ಕೇರಳದ ಮೆಹರೂಫ್ ಎಂಬಾತನನ್ನು ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಎಸ್ಪಿ ರಾಮರಾಜನ್ ತಿಳಿಸಿದ್ದಾರೆ.
ಬ್ಯಾಂಕಾಕ್ನಿಂದ ಬೆಂಗಳೂರು ವಿಮಾನ ನಿಲ್ದಾಣದ ಮೂಲಕವೇ ಆರೋಪಿಗಳು ಈ ಮಾದಕ ವಸ್ತುವನ್ನು ತರುತ್ತಿದ್ದ ವಿಷಯ ತನಿಖೆಯಲ್ಲಿ ದೃಢಪಟ್ಟಿದೆ. ವಿಮಾನ ನಿಲ್ದಾಣದಲ್ಲಿರುವ ಕೆಲವೊಂದು ತಾಂತ್ರಿಕ ದೋಷಗಳಿಂದ ಇವರು ಅಲ್ಲಿ ಸಿಕ್ಕಿ ಬೀಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈ ದಂಧೆಯಲ್ಲಿ ಕೊಡಗು ಜಿಲ್ಲೆಯ ಮಂದಿಗಳು ಭಾಗಿಯಾಗಿದ್ದು ಕೊಡಗು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಹಲವರು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದಾರೆ ಎಂಬ ಸಂದೇಹಗಳು ಮೂಡಿವೆ.