ಬಂಟ್ವಾಳ : ಲಯನ್ಸ್ ಮತ್ತು ಲಿಯೋ ಕ್ಲಬ್ ಕದ್ರಿಹಿಲ್ಸ್ ಎಂ.ಜೆ.ಎಫ್., ಮಂಗಳೂರು, ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರ, ಪಲ್ಲಮಜಲು ಇವರ ಜಂಟಿ ಆಶ್ರಯದಲ್ಲಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇದರ ಸಹಯೋಗದಲ್ಲಿ, ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆ, ದೇರಳಕಟ್ಟೆ ನೇತೃತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರ ಪಲ್ಲಮಜಲು ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರ ವಠಾರದಲ್ಲಿ ನಡೆಯಿತು.
ಆನ್ಕಾಲಜಿಸ್ಟ್ ಡಾ. ನಜೀಬ್ ದೀಪಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಅಕ್ಟೋಬರ್ ತಿಂಗಳು ಕ್ಯಾನ್ಸರ್ ಅವರ್ನೆಸ್ ತಿಂಗಳಾಗಿದ್ದು, ಕ್ಯಾನ್ಸರ್ ರೋಗದ ಪತ್ತೆ ಹಚ್ಚುವಿಕೆ ಬಗ್ಗೆ ತಿಳಿಸಿದರು. ಸರಿಯಾಗಿ ಔಷಧ ತೆಗೆದುಕೊಂಡರೆ ಕ್ಯಾನ್ಸರ್ ಸಂಪೂರ್ಣ ಗುಣಮುಖವಾಗುವ ಖಾಯಿಲೆ, ಹಿಂದಿನ ಕಾಲದಲ್ಲಿ ಕ್ಯಾನ್ಸರ್ ರೋಗವೇ ಇರಲಿಲ್ಲ. ಇದೀಗ ಯಾಕಾಗಿ ಬರುತ್ತಿದೆ. ಅದನ್ನು ತಡೆಗಟ್ಟುವ ವಿಚಾರ ಹಾಗೂ ರೋಗದ ಬಗ್ಗೆ ಒಂದಷ್ಟು ಮಾಹಿತಿ ಮತ್ತು ಎಚ್ಚರಿಕೆಯಿಂದ ಇರುವ ಬಗ್ಗೆ ತಿಳಿಸಿದರು.
ಲಯನ್ಸ್ ಕ್ಲಬ್ ಕದ್ರಿ ಇದರ ಅಧ್ಯಕ್ಷ ಪ್ರಕಾಶನ್ ಅವರು ಅಧ್ಯಕ್ಷ ಸ್ಥಾನದಿಂದ ತಮ್ಮ ಹಿತ ನುಡಿಗಳನ್ನು ನುಡಿದರು.
ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರ ಪಲ್ಲಮಜಲು ಇದರ ಅಧ್ಯಕ್ಷ ಗಣೇಶ್ ದಾಸ್ ಮಾತನಾಡಿ, ಸಂಘ ಆರಂಭಿಸಿ 25 ವರುಷ ಸಂದಿರುವುದರಿಂದ ಸಾರ್ವಜನಿಕ ಸೇವೆಯ ರೂಪದಲ್ಲಿ 25 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಉಚಿತ ವೈದ್ಯಕೀಯ ಶಿಬಿರ ಹತ್ತನೇಯ ಕಾರ್ಯಕ್ರಮವೆಂದು ತಿಳಿಸಿದರು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ವ್ಯವಸ್ಥಾಪಕಿ ಸವಿತಾ ನಾಗರಾಜ್ ಆಗಮಿಸಿದ್ದರು.
ಲಯನ್ಸ್ ಕ್ಲಬ್ ಕದ್ರಿ ಇದರ ಸದಸ್ಯ ಲಯನ್ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭಕ್ತಾಂಜನೇಯ ಸಂಘದ ಕಾರ್ಯದರ್ಶಿ ಸತೀಶ್ ಪಲ್ಲಮಜಲು ವಂದನಾರ್ಪಣೆಗೈದರು.
ಕಾರ್ಯಕ್ರಮದ ಮುಖ್ಯ ಸಂಯೋಜಕರಾಗಿ ಲಯನ್ ಗೋವಿಂದ ಶರ್ಮ ಹಾಗೂ ಉಪ ಸಂಯೋಜಕರಾಗಿ ಲಯನ್ ಎನ್.ಟಿ. ರಾಜ ಮಂಗಳೂರು ಕಾರ್ಯಕ್ರಮದ ಸಂಯೋಜನೆ ಮಾಡಿದ್ದರು.
ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುರೇಶ ನೆಗಳಗುಳಿ ಮತ್ತು ಲಯನ್ಸಿನ ಅನೇಕ ಹಿರಿಯ ಸದಸ್ಯರು ಹಾಜರಿದ್ದರು.
ಪಲ್ಲಮಜಲು, ಮೊಡಂಕಾಪು, ಬಿ.ಸಿ.ರೋಡ್ ಸ್ಥಳೀಯ ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.