ದಾವಣಗೆರೆ: ವರನ ಸೋಗಿನಲ್ಲಿ ಅಮಾಯಕ ಯುವತಿಯರಿಗೆ 62 ಲಕ್ಷ ರೂ. ವಂಚಿಸಿದ್ದ ಆರೋಪಿಯನ್ನು ದಾವಣಗೆರೆ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಎಂ.ಮಧು (31) ಯುವತಿಯರಿಗೆ ವಂಚಿಸಿದ ಆರೋಪಿ. ಮಂಡ್ಯ ತಾಲೂಕಿನ ಮಾಚನಹಳ್ಳಿ ನಿವಾಸಿ ಎಂ.ಮಧು, ವಧು-ವರ ಶೋಧ ತಾಣಗಳಾದ ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಬಳಿಕ, “ನಿಮಗೆ ಸರ್ಕಾರಿ ನೌಕರಿ ಕೊಡಿಸಿ, ನಂತರ ಮದುವೆ ಆಗುತ್ತೇನೆ” ಅಂತ ನಂಬಿಸಿ ಅವರಿಂದ ಹಣ ಪಡೆದು ವಂಚಿಸಿದ್ದಾನೆ.
ದಾವಣಗೆರೆ ಮೂಲದ ಯುವತಿಯೊಬ್ಬಳಿಗೆ ಮೈಸೂರು ರೇಲ್ವೆ ವರ್ಕಶಾಪ್ನಲ್ಲಿ ಕೆಲಸ ಕೊಡಿಸುವುದಾಗಿ ಆರೋಪಿ ಮಧು 21 ಲಕ್ಷ ರೂಪಾಯಿ ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾನೆ. ಹಣ ಖಾತೆಗೆ ಬಂದ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. ತಾನು ವಂಚನೆಗೆ ಒಳಗಾಗಿದ್ದೇನೆಂದು ಯುವತಿ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಇದೇ ರೀತಿ ಆರೋಪಿ ಮಧು, ಚಿಕ್ಕಮಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಯುವತಿಯಿಂದ 3.80 ಲಕ್ಷ ರೂ., ಮಂಡ್ಯ ಸಿಇಎನ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿನ ಯುವತಿಯಿಂದ 26 ಲಕ್ಷ ರೂ., ಬೆಂಗಳೂರು ಕಾಟನ್ ಪೇಟ್ ಠಾಣೆ ವ್ಯಾಪ್ತಿಯಲ್ಲಿನ ಯುವತಿಯಿಂದ 2.8 ಲಕ್ಷ ರೂ., ಮೈಸೂರು ಸಿಇಎನ್ ಠಾಣೆಯ ಸೇರಿದಂತೆ ಏಳು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಯುವತಿರಿಂದ ಒಟ್ಟು 62 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ.
ಮ್ಯಾಟ್ರಿಮೋನಿಗಳ ಮೂಲಕ ವಂಚಕರು ಪರಿಚಯ ಮಾಡಿಕೊಂಡು ಹೆಣ್ಣು ಮಕ್ಕಳಿಗೆ ನಯವಾಗಿ ಮಾತನಾಡಿ ವಂಚಿಸುವವರ ಬಗ್ಗೆ ಹಾಗೂ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಹಾಕಿಸಿಕೊಂಡು ವಂಚಿಸುವವರ ಬಗ್ಗೆ ಜಾಗೃತರಾಗಿರಿ. ಇಂತಹ ಘಟನೆಗಳು ಕಂಡುಬಂದರೆ ಕೂಡಲೇ ಸ್ಥಳೀಯ ಠಾಣೆಗೆ ಹೋಗಿ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

























