ಕಡಬ : ಕೋಡಿಂಬಾಳ ಗ್ರಾಮದ ರಾಮನಗರದಲ್ಲಿರುವ ಶ್ರೀ ಆದಿ ನಾಗಬ್ರಹ್ಮ – ಮೊಗೇರ್ಕಳ ಹಾಗೂ ಕೊರಗಜ್ಜ ದೈವಸ್ಥಾನದ ಕಾಣಿಕೆ ಹುಂಡಿಗಳನ್ನು ಮುರಿದು ಕಳ್ಳರು ಹಣ ಕಳವುಗೈದ ಘಟನೆ ನ.16 ರ ರಾತ್ರಿ ನಡೆದಿದೆ.
ಶನಿವಾರ ದಿನ ದೈವಸ್ಥಾನದಲ್ಲಿ ಅಗೆಲು ಸೇವೆ ನಡೆದಿದ್ದು ಅನ್ನಸಂತರ್ಪಣೆ ಬಳಿಕ ಎಲ್ಲರೂ ತೆರಳಿದ್ದರು. ಅದೇ ದಿನ ರಾತ್ರಿ ಈ ಕಳ್ಳತನ ನಡೆದಿದೆ.
ನ.16ರ ರಾತ್ರಿ 2 ಗಂಟೆಯ ಸುಮಾರಿಗೆ ದೈವಸ್ಥಾನ ಬಳಿ ಇರುವ ಮನೆಯವರಿಗೆ ಶಬ್ದ ಕೇಳಿ ಎಚ್ಚರಗೊಂಡಿದ್ದರು. ನ.17ರ ಮುಂಜಾನೆ ದೈವಸ್ಥಾನಕ್ಕೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಕಾಣಿಕೆ ಹುಂಡಿ ಒಡೆಯಲು ಬಳಸಿರುವ ಕಬ್ಬಿಣದ ಸಾಧನವೊಂದು ಸ್ಥಳದಲ್ಲಿ ಪತ್ತೆಯಾಗಿದೆ. ಘಟನೆಯ ಮಾಹಿತಿ ತಿಳಿದು ಕಡಬ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಳ್ಳರು ಕಾಣಿಗೆ ಡಬ್ಬಿ ಒಡೆಯಲು ಕೋಡಿಂಬಾಳ ಮುಖ್ಯ ಪೇಟೆಯಲ್ಲಿರುವ ವೆಲ್ಡಿಂಗ್ ಶಾಪ್ನಲ್ಲಿ ಬಳಸಿರುವ ಸಾಧನವನ್ನು ಬಳಸಿರುವುದು ಬೆಳಕಿಗೆ ಬಂದಿದ್ದು ಸ್ಥಳೀಯ ಕಳ್ಳರೇ ಆಗಿರಬಹುದೆಂದು ಗ್ರಾಮಸ್ಥರು ಸಂಶಯ ಪಟ್ಟಿದ್ದಾರೆ.
ಕಳ್ಳತನ ನಡೆದಿರುವ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮದ ನಿವಾಸಿಗಳು ದೈವಸ್ಥಾನಕ್ಕೆ ಆಗಮಿಸಿದ್ದು ದೈವಸ್ಥಾನದ ಆಡಳಿತ ಮಂಡಳಿಯವರು ಕಳ್ಳರ ಪತ್ತೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

























